ಜಿಮ್ನಲ್ಲಿ ದೇಹ ದಂಡಿಸುವಾಗ ಹೃದಯಾಘಾತದಿಂದ ಶುಕ್ರವಾರ ಸಾವನ್ನಪ್ಪಿದ ಡಾ.ರಾಜ್ ಅವರ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ (46) ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬರುತ್ತಿದೆ. ಚಂದನವನದ ಪ್ರತಿಷ್ಠಿತ ಕುಟುಂಬದ ಕುಡಿಯಾದರೂ ಅವರಲ್ಲಿದ್ದ ಸರಳತೆ, ಸಜ್ಜನಿಕೆ, ಇನ್ನೂ ಚೆನ್ನಾಗಿ ಅಭಿನಯಿಸಬೇಕು, ಸವಾಲಿನ ಪಾತ್ರಗಳನ್ನು ಮಾಡಬೇಕೆಂಬ ತುಡಿತವನ್ನು ಸ್ನೇಹಿತರು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.
ಇಂಥ ಹೊತ್ತಿನಲ್ಲಿ ಸ್ಟ್ಯಾಂಡ್ಅಪ್ ಹಾಸ್ಯಕಲಾವಿದ, ರೇಡಿಯೊ ಜ್ಯಾಕಿ, ಸ್ಕ್ರಿಪ್ಟ್ ಬರಹಗಾರ ಡ್ಯಾನಿಷ್ ಸೇಟ್, ಜಾಗತಿಕ ಶ್ರೀಮಂತ ಉದ್ಯಮಿಯಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಜತೆ ಪುನೀತ್ ಭಾಗಿಯಾಗಿದ್ದ ಕಾರ್ಯಕ್ರಮವೊಂದರ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಮೆಜಾನ್ ಪ್ರೈಮ್ನ ಒಂದು ಕಾರ್ಯಕ್ರಮದಲ್ಲಿ ಜೆಫ್ ಬೆಜೋಸ್ ಭಾಗವಹಿಸಿದ್ದರು. ಇದರಲ್ಲಿ ಭಾರತೀಯ ಸಿನಿಮಾರಂಗದ ಅನೇಕರು ಪಾಲ್ಗೊಂಡಿದ್ದರು. ಇವರಲ್ಲಿ ಬಹುತೇಕರು ಜೆಫ್ ಬೆಜೋಸ್ ಜತೆ ಫೋಟೋ ತೆಗೆಯಿಸಿಕೊಳ್ಳಲು ನಾ ಮುಂದು, ತಾಮುಂದು ಎಂದು ಹಾತೊರೆಯುತ್ತಿದ್ದರು. ಆದರೆ, ಪುನೀತ್ ಈ ಗೊಡವೆಗೆ ಹೋಗದೆ ಒಂದು ಮೂಲೆಯಲ್ಲಿ ನಿಂತಿದ್ದರು.
ಅಮೆಜಾನ್ ಪ್ರೈಮ್ ತಂಡದಲ್ಲಿ ಕೆವಲರಿಗೆ ಇದು ಆಶ್ಚರ್ಯವನ್ನುಂಟು ಮಾಡಿತು. ಅವರು ಪುನೀತ್ ಬಳಿಗೆ ಹೋಗಿ, ‘ಅಪ್ಪು ನೀವೇಕೆ ಫೋಟೋ ತೆಗೆಯಿಸಿಕೊಳ್ಳಲು ಹೋಗಿಲ್ಲ. ಒಬ್ಬೊಂಟಿಯಾಗಿ ಇರುವಿರಿ? ಯಾರನ್ನು ಭೇಟಿಯಾಗಬೇಕು, ಫೋಟೋ ತೆಗೆಯಿಸಿಕೊಳ್ಳಬೇಕು ಹೇಳಿ, ಅವರನ್ನೇ ಇಲ್ಲಿಗೆ ಕರೆದುಕೊಂಡು ಬರುತ್ತೇವೆ’ ಎಂದರು.
ಇದಕ್ಕೆ ಮುಗುಳ್ನಕ್ಕ ಪುನೀತ್, ‘ನಾನು ನಿಜವಾಗಿ ಭೇಟಿಯಾಗಬೇಕಿರುವುದು ಪಂಕಜ್ ತ್ರಿಪಾಠಿಯವರನ್ನು (2012ರಲ್ಲಿ ತೆರೆಕೆಂಡ ಗ್ಯಾಂಗ್ ಆಫ್ ವಾಸ್ಸೀಪುರ್ ಸಿನಿಮಾದ ನಟ)’ ಎಂದರು. ಇದು ಅಪ್ಪು ಅಣ್ಣ ಪ್ರತಿಭೆಗಳನ್ನು ಗುರುತಿಸುತ್ತಿದ್ದ ಪರಿ ಎಂದು ಡ್ಯಾನಿಷ್ ತಮ್ಮ ನೆನಪಿನ ಬುತ್ತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಮಾರ್ಗದರ್ಶಿ ಮತ್ತು ಹೀರೋ ಇನ್ನಿಲ್ಲ ಎಂಬ ವಿಷಯ ಕೇಳಿ ಹೃದಯ ಒಡೆದಿದೆ. ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ಪುನೀತ್ ಅಣ್ಣ ಜಗತ್ತಿನಲ್ಲಿ ಅತ್ಯಂತ ಸ್ನೇಹಜೀವಿ ವ್ಯಕ್ತಿ” ಎಂದು ಡ್ಯಾನಿಷ್ ಬರೆದುಕೊಂಡಿದ್ದಾರೆ. ಪುನೀತ್ ಅವರ ನಿಮರ್ಮಿಸಿದ “ಫ್ರೆಂಚ್ ಬಿರ್ಯಾನಿ” ಸಿನಿಮಾದಲ್ಲಿ ಡ್ಯಾನಿಷ್ ಅಭಿನಯಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ಪುನೀತ್ ಅವರ ಪಿಆರ್ಕೆ ಪ್ರೋಡಕ್ಷನ್ “ಫ್ರೆಂಚ್ ಬಿರ್ಯಾನಿ” ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಿತ್ತು ಪನ್ನಗಾಭರಣ ಈ ಸಿನಿಮಾವನ್ನು ನಿರ್ದೇಶಿಸಿದ್ದರು.
ಪುನೀತ್ ಜತೆಗಿನ ಒಡನಾಟದ ಇನ್ನೊಂದು ಘಟನೆಯನ್ನು ಡ್ಯಾನಿಷ್ ಈ ರೀತಿ ಬರೆದುಕೊಂಡಿದ್ದಾರೆ: ಅಣ್ಣ ನೀವೇಕೆ ಬೇರೆಯವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀರಿ. ದುಡ್ಡು ಸುರಿದು ರಿಸ್ಕ್ ತೆಗೆದುಕೊಳ್ಳುತ್ತೀರಿ? ನಿಮ್ಮ ಸಿನಿಮಾದಲ್ಲಿ ನೀವೇ ಅಭಿನಯಿಸಬಹುದಲ್ಲ’ಎಂದು ಕೇಳಿದ್ದೆ. ಇದಕ್ಕೆ ಅವರು ಹೇಳಿದರು-“ಡ್ಯಾನಿ, ಕಲಾವಿದರ ಮೇಲೆ ಒಂದು ಗುರುತರಹದ ಜವಾಬ್ದಾರಿ ಇರುತ್ತದೆ. ನಾವು ಮುಂದಿನ ತಲೆಮಾರಿನ ಕಲಾವಿದರನ್ನು ಬೆಳಸಬೇಕು.
ಜನರಿಗೆ ಮನರಂಜನೆ ನಿರಂತರವಾಗಿ ಸಿಗಬೇಕು ಎಂದಿದ್ದರು.’ ಇಂಥ ಸಹೃದಯಿ, ಅತ್ಯಂತ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಅವರೊಂದಿಗೆ ಐದು ನಿಮಿಷ ಕಳೆದರೂ ಸಾಕು ಅವರ ಪ್ರಭಾವಕ್ಕೆ ಒಳಗಾಗುತ್ತೇವೆ ಎಂದು ಡ್ಯಾನಿಷ್ ಕಂಬನಿಗರೆದಿದ್ದಾರೆ. ಪುನೀತ್ ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಾಂತ್ವನ ಹೇಳಿದ್ದಾರೆ.
💔 #PuneethRajkumar pic.twitter.com/j9iRXhINp8
— Danish Sait (@DanishSait) October 29, 2021
ಇದನ್ನೂ ಓದಿ: Puneeth Rajkumar: ಪುನೀತ್ ರಾಜ್ಕುಮಾರ್ ಅಕಾಲ ಮರಣಕ್ಕೆ ಏನು ಕಾರಣ? ಹೃದಯಘಾತ ಮತ್ತು ಹೃದಯ ಸ್ತಂಭನ ಏನು ವ್ಯತ್ಯಾಸ?
ಇದನ್ನೂ ಓದಿ: suicide: ಕಾಫಿನಾಡಿನಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿ ಆತ್ಮಹತ್ಯೆ
Discussion about this post