ಚೆನ್ನೈ: ಕೊರೊನಾ ಸಾಂಕ್ರಾಮಿಕದ ಕಟ್ಟಲೆಗಳು ಸಡಿಲಗೊಂಡ ಮೇಲೆ ದೀಪಾವಳಿ ವೇಳೆಗೆ ಬಿಡುಗಡೆಯಾದ ‘ಅಣ್ಣಾಥೆ’ ಸಿನಿಮಾ ಬಗ್ಗೆ ಸೂಪರ್ಸ್ಟಾರ್ ರಜನಿಕಾಂತ್ ಸಾಮಾಜಿಕ ಜಾಲತಾಣ ‘ಹೂಟೆ’ಯಲ್ಲಿ ಆಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
“ನಿರ್ದೇಶಕ ಶಿವ ನನ್ನನ್ನು ಹೊಸ ಸ್ಟೈಲ್ನಲ್ಲಿ ತೋರಿಸಿದ್ದಾರೆ. ಈ ಸಿನಿಮಾದ ಕಥೆ ಕೇಳಿ ನಿಜಕ್ಕೂ ಕಣ್ಣೀರಿಟ್ಟೆ” ಎಂದು ಹೇಳಿಕೊಂಡಿದ್ದಾರೆ. “ಅಜಿತ್ ಅಭಿನಯದ ಶಿವ ನಿರ್ದೇಶನದ ‘ವಿಶ್ವಾಸಂ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದನ್ನು ವೀಕ್ಷಿಸಬೇಕೆಂದು ನಿರ್ಮಾಪಕ ಸತ್ಯ ಜ್ಯೋತಿ ತ್ಯಾಗರಾಜನ್ಗೆ ಹೇಳಿದೆ. ನನಗಾಗಿ ವಿಶೇಷ ಪ್ರದರ್ಶನವನ್ನೆ ಮಾಡಿಬಿಟ್ಟರು. ಮಧ್ಯಂತರದವರೆಗೆ ಸಿನಿಮಾ ಬಹು ಆಸಕ್ತಿಯನ್ನು ಕಾಯ್ದುಕೊಂಡಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಒಗಟಾಗಿದ್ದು, ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ನಿಜಕ್ಕೂ ಅರ್ಹವಾಗಿದೆ’ ಎಂದು ಅವರಿಗೆ ಹೇಳಿದೆ.
“ಇಂಥದ್ದೆ ಒಳ್ಳೆಯ ಕಥೆ ಇದ್ದರೆ ತನ್ನಿ ಎಂದು ನಿರ್ದೇಶಕ ಶಿವ ಅವರಿಗೆ ತಿಳಿಸಿದೆ. 15 ದಿನ ಸಮಯ ಕೇಳಿದರು. ಆದರೆ, 12 ದಿನದಲ್ಲೇ ‘ಅಣ್ಣಾಥೆ’ ಕಥೆಯೊಂದಿಗೆ ಬಂದರು. ಎರಡೂವರೆ ತಾಸು ಬೇಸರ ಇಲ್ಲದೆ ಅದನ್ನು ಹೇಳಿದರು. ಕಣ್ಣೀರು ತಡೆಯಲು ಆಗಲಿಲ್ಲ’ ಎಂದು ರಜನಿ ಹೇಳಿದ್ದಾರೆ.
ರಜನಿ ಅವರ ಅಭಿಪ್ರಾಯ ಕೇಳಿ ಸಂತಸಗೊಂಡ ನಿರ್ದೇಶಕ ಶಿವ, “ಈ ರೀತಿಯ ಒಂದು ಅನಿಸಿಕೆಯನ್ನು ನನಗೆ ಯಾರೊಬ್ಬರೂ ಹೇಳಿರಲಿಲ್ಲ. ಇಂಥ ಬೆನ್ನುತಟ್ಟುವ, ವಿನಮ್ರ ಭಾವವೆ ರಜನಿ ದೊಡ್ಡ ನಟನಾಗಲು ಕಾರಣ” ಎಂದಿದ್ದಾರೆ.
ಇದನ್ನೂ ಓದಿ: ತಲೈವನ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್; ರಜಿನಿಕಾಂತ್ ನಡೆಗೆ ಆಕ್ಷೇಪ
Discussion about this post