ಕರ್ನಾಟಕದಲ್ಲಿ ಪುನೀತ್ ರಾಜ್ಕುಮಾರ್ ಅವರ ಮೇಲಿನ ಪ್ರೀತಿ ಬೋರ್ಗರೆಯುತ್ತಿದೆ. ಅಗಲಿಕೆಯ ನಂತರ ಮತ್ತಷ್ಟು ಹೆಚ್ಚಾಗಿದೆ. ಇಡೀ ರಾಜ್ಯವೇ ಅವರ ನೆನಪಲ್ಲಿ ಮಿಂದು ಹೋಗಿದೆ. ಹತ್ತು ದಿನ ಕಳೆದರೂ ಪುನೀತರ ಅಗಲಿಕೆಯ ನೋವು ಯಾರೂ ಮರೆತಿಲ್ಲ, ಮರೆಯಲೂ ಆಗುತ್ತಿಲ್ಲ. ಸಾವಿನ ನೋವಿಗೆ ಕಾಲವೇ ಮದ್ದು ಅನ್ನೋದು ಅಪ್ಪುವಿಚಾರದಲ್ಲಿ ಸುಳ್ಳಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ನಾಳೆ ಅಂದರೆ ನವೆಂಬರ್ 7ರ ಭಾನುವಾರದಂದು ರಾಜ್ಯದಾದ್ಯಂತ ಏಕಕಾಲಕ್ಕೆ ಪುನೀತ್ ಅವರಿಗೆ ಬೃಹತ್ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಾಟಾಗಿದೆ.
ಇದನ್ನು ಕನ್ನಡ ಚಿತ್ರ ಪ್ರದರ್ಶಕರು ಏರ್ಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ ಎಂದು ಹೆಸರು ಇಡಲಾಗಿದೆ. ಭಾನುವಾರ ಸಂಜೆ 6 ಗಂಟೆಗೆ ಹೊತ್ತಿಗೆ ನಾಡಿನ ಎಲ್ಲ ಚಿತ್ರಮಂದಿರಗಳ ಆವರಣದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಹೂವು, ದೀಪ, ಗೀತನಮನಗಳ ಮೂಲಕ ಪುನೀತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಚಿತ್ರಪ್ರದರ್ಶಕರು, ಅಲ್ಲಿನ ಸಿಬ್ಬಂದಿ ಹಾಗೂ ಅಭಿಮಾನಿಗಳೂ ಕೂಡ ಕೈ ಜೋಡಿಸಲಿದ್ದಾರೆ.
ಗೀತ ನಮನ
ರಾಜ್ಯದ ಎಲ್ಲ ಚಿತ್ರ ಮಂದಿರಗಳ ಆವರಣದಲ್ಲಿ ಏಕಕಾಲದಲ್ಲಿ, ಒಂದೇ ಹಾಡನ್ನು ಹಾಡುವ ಮೂಲಕ ಗೀತನಮನ ಸಲ್ಲಿಸುವ ಈ ಕಾರ್ಯಕ್ರಮದ ಒಂದು ಭಾಗವಾಗಿದೆ. ಈಗಾಗಲೇ, ಚಿತ್ರಸಾಹಿತಿ ಡಾ. ವಿ. ನಾಗೇಂದ್ರಪ್ರಸಾದ್ ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು ಎನ್ನುವ ಹಾಡನ್ನು ರಚಿಸಿದ್ದಾರೆ.
ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಏಕಕಾಲಕ್ಕೆ ಈ ಹಾಡನ್ನು ಹಾಡುವ ಮೂಲಕ ಅಪ್ಪುವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುವುದು.
Song Tribute to Puneeth Rajkumar
Discussion about this post