ಜನಪ್ರಿಯ ತಮಿಳು ನಾಯಕನಟ ಸೂರ್ಯ ತಮ್ಮದೇ ಅಭಿನಯದ “ಜೈಭೀಮ್” ಚಿತ್ರದ ಟೀಸರ್ಅನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಅಸ್ಪೃಶ್ಯತೆಯ ಕ್ರೌರ್ಯದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯನ್ನಾಧರಿಸಿದ ಚಿತ್ರ ಇದಾಗಿದ್ದು ಸೂರ್ಯ ಇದರಲ್ಲಿ ದೌರ್ಜನ್ಯದ ವಿರುದ್ಧ ಹೋರಾಡುವ ವಕೀಲನಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು “ನೈಜ ಘಟನೆಗಳು ಸಮಾಜದಲ್ಲಿ ಪರಿವರ್ತನೆಯನ್ನು ಉಂಟುಮಾಡಬಲ್ಲವು ಎಂಬದನ್ನು ನಾನು ಬಲವಾಗಿ ನಂಬುತ್ತೇನೆ. ಜೈಭೀಮ್ ಜನರಮೇಲೆ ತೀವ್ರ ಪ್ರಭಾವ ಬೀರಬಲ್ಲ ಚಿತ್ರವಾಗಲಿದ್ದು ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದರು.”
90ರ ದಶಕದಲ್ಲಿ ಘಟಿಸಿದ ನೈಜ ಘಟನೆಗಳನ್ನು ಆಧರಿಸಿ ತಯಾರಿಸಲಾದ ಈ ಚಿತ್ರದ ಟೀಸರ್ ನ್ಯಾಯಲಯದ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಸೂರ್ಯ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಜಾತಿಯ ಕಾರಣಕ್ಕಾಗಿ ಅನುಭವಿಸಿದ ಕ್ರೌರ್ಯವನ್ನು ವೈಭವೀಕರಿಸದೆ ಅಥವಾ ಮರೆಮಾಚದೆ ಇದ್ದದ್ದನ್ನು ಇದ್ದಂತೆಯೇ ಹೇಳುವಂತೆ ಕೇಳುತ್ತಾನೆ. ನೈಜ ಘಟನೆಯನ್ನು ಅದು ಇರುವಂತೆಯೇ, ಸ್ವಲ್ಪವೂ ವೈಭವೀಕರಿಸದೆ ಪ್ರೇಕ್ಷಕರ ಮುಂದಿಡಬೇಕೆಂಬುದು ನಿರ್ದೇಶಕನ ಉದ್ದೇಶವಿದ್ದಂತೆ ಭಾಸವಾಗುತ್ತದೆ.
ಘಟನೆಯ ಮುಖ್ಯ ಕಾರಣವನ್ನು ಟೀಸರ್ ಅನಾವರಣಗೊಳಿಸದಿದ್ದರೂ, ವಕೀಲನೊಬ್ಬನು ಆ ಬುಡಕಟ್ಟು ಜನಾಂಗದ ಮಹಿಳೆಗಾದ ಅನ್ಯಾಯಕ್ಕಾಗಿ ಸರಕಾರವನ್ನೇ ನ್ಯಾಯಾಲಯದ ಕಟಕಟೆಗೆಳೆಯುವುದು ಘಟನೆಯ ಗಂಭೀರತೆಯ ಬಗ್ಗೆ ಸುಳಿವು ನೀಡುತ್ತದೆ. ಬುಡಕಟ್ಟು ಜನಾಂಗದವರ ಮೇಲೆ ಕಾನೂನು ವಿಭಾಗದ ಅಧಿಕಾರಿಗಳು ನಡೆಸುವ ದೌರ್ಜನ್ಯವನ್ನು ದೃಶ್ಯಗಳಲ್ಲಿ ನೋಡಬಹುದಾಗಿದೆ. ಪೋಲೀಸರು ನಿರ್ದಯವಾಗಿ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರೆ ಉಳಿದ ವಕೀಲರು ಅವರ ನ್ಯಾಯದ ಬೇಡಿಕೆಯನ್ನು ಪ್ರಚಾರದ ತಂತ್ರವೆಂದು ಅಸಡ್ಡೆ ತೋರುತ್ತಾರೆ. ಆದರೆ ಇಂತಹ ಕ್ರೂರ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಒಬ್ಬನೇ ಒಬ್ಬ ವಕೀಲ (ಸೂರ್ಯ) ಇದರ ವಿರುದ್ಧ ಹೋರಾಡಲು ಮತ್ತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಸಿದ್ಧನಾಗುತ್ತಾನೆ.
ಪತ್ರಕರ್ತನಿಂದ ಸಿನಿಮಾ ನಿರ್ದೇಶಕರಾದ ಜ್ಞಾನವೇಲ್ ನಿರ್ದೇಶನದ ಈ ಚಿತ್ರ ಒಂದು ತೀವ್ರ ಭಾವೋದ್ವೇಗದ ಚಿತ್ರವಾಗಿರುವ ಎಲ್ಲ ಲಕ್ಷಣಗಳೂ ಟೀಸರ್ನಲ್ಲಿ ಕಾಣುತ್ತವೆ. ಚಿತ್ರದ ಇತರ ಪಾತ್ರಗಳಲ್ಲಿ ರಜಿಷಾ ವಿಜಯನ್ ಮತ್ತು ಪ್ರಕಾಶ್ ರಾಜ್ ಮುಂತಾದ ಘಟಾನುಘಟಿ ನಟ-ನಟಿಯರಿದ್ದಾರೆ. ಸೂರ್ಯ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವುದಲ್ಲದೇ ತಮ್ಮದೇ ಬ್ಯಾನರ್ 2D ಎನ್ಟರ್ಟೇನ್ಮೆಂಟ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಅಮೆಜಾನ್ ಪ್ರೈಮ್ ವಿಡಿಯೋದೊಡನೆ ನಾಲ್ಕು ಚಿತ್ರಗಳ ಒಪ್ಪಂದ ಮಾಡಿಕೊಂಡಿರುವ ಈ ಸಂಸ್ಥೆಯ 3ನೇ ಚಿತ್ರ ಇದಾಗಿದ್ದು ಕಳೆದ ತಿಂಗಳು (ಸೆಪ್ಟೆಂಬರ್) ಬಿಡುಗಡೆಯಾದ ರಾಮೇ ಆಂಡಲುಮ್ ರಾವಣೇ ಆಂಡಲುಮ್ ಮೊದಲ ಚಿತ್ರ, ಜ್ಯೋತಿಕಾ ಹಾಗೂ ಶಶಿಕುಮಾರ್ ನಟನೆಯ ಉಡಾನ್ಪಿರಪ್ಪೆ ಎರಡನೆಯ ಚಿತ್ರವಾಗಿದ್ದು, ನಾಲ್ಕನೆಯ ಚಿತ್ರ ಓಹ್ ಮೈ ಡಾಗ್ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
ಇದಲ್ಲದೇ, ಸೂರ್ಯ ಪಾಂಡಿರಾಜ್ ನಿರ್ದೇಶನದ “ಎಥರ್ಕುಮ್ ಥುನಿನ್ಧವನ್” ಚಿತ್ರದಲ್ಲಿ ನಟಿಸುತ್ತಿದ್ದು ಇದರಲ್ಲಿ ಪ್ರಿಯಾಂಕ ಮೋಹನ್ ಮತ್ತು ಸತ್ಯರಾಜ್ ಸಹ ನಟಿಸುತ್ತಿದ್ದಾರೆ.
Suriya fights for justice for a tribal woman victim of atrocities
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
ಇದನ್ನೂ ಓದಿ: ಹಿರಿಯ ನಟ, ಸಾಮಾಜಿಕ ಚಿಂತಕ ಪ್ರೊ.ಜಿ.ಕೆ.ಗೋವಿಂದ ರಾವ್ ನಿಧನ
Discussion about this post