ನವೆಂಬರ್ 14 ಭಾರತೀಯರಿಗೆ ಮಕ್ಕಳ ದಿನಾಚರಣೆಯ ಉತ್ಸಾಹದ ಜೊತೆಗೆ ವಿಶ್ವಮಧುಮೇಹದಿನವಾಗಿ ಎಚ್ಚರಿಕೆಯ ಗಂಟೆಯೂ ಆಗಿದೆ. ಅತಿ ಹೆಚ್ಚಿನ ಸಂಖ್ಯೆಯ ಮುಧುಮೇಹಿಗಳು ಭಾರತದಲ್ಲೇ ಇದ್ದು ವಿಶ್ವದ ಮಧುಮೇಹದ ರಾಜಧಾನಿಯಾಗಿ ಗುರುತಿಸಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದೊಂದು ಪಿಡುಗಿನ ರೂಪವನ್ನು ಧರಿಸಿದ್ದು ದಿನೇ-ದಿನೇ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನ ಕಬಂಧ ಬಾಹುಗಳೊಳಗೆ ಹುದುಗಿಸಿಕೊಳ್ಳುತ್ತಿದೆ. ಆದರೂ, ಇನ್ನೂ ಸಮಯ ಮಿಂಚಿಲ್ಲ. ಆರೋಗ್ಯಕರ ಆಹಾರ ಕ್ರಮಗಳನ್ನು ಅನುಸರಿಸುವುದರ ಮೂಲಕ ಹಾಗೂ ಕೆಲವೊಂದು ಹಿತ-ಮಿತವಾದ ವ್ಯಾಯಾಮ ಪದ್ಧತಿಗಳನ್ನು ರೂಢಿಸಿಕೊಳ್ಳುವುದರ ಮೂಲಕ ನಾವು ಇದರೊಂದಿಗೆ ವಿರದ್ಧ ಹೋರಾಡಿ ಗೆಲ್ಲಬಹುದಾದ ಸಾಧ್ಯತೆಯಿದೆ. ಬಾಯಿಚಪಲದ ದೌರ್ಬಲ್ಯವನ್ನು ಗೆಲ್ಲುವುದು ಸಾಧ್ಯವಾಗಬಹುದಾದರೆ ಮಾತ್ರ ಇದರ ಮೇಲೆ ನಾವು ನಿಯಂತ್ರಣ ಸಾಧಿಸಬಹುದಾಗಿದ್ದು ಇಲ್ಲವಾದರೆ ಅದೇ ನಮ್ಮ ಮೇಲೆ ವಿಜೃಂಭಿಸುವ ಸಾಧ್ಯತೆ ಹೆಚ್ಚಿದೆ.
ವಿಶ್ವದ ಹೆಚ್ಚಿನ ಸಂಖ್ಯೆಯ ಜನರನ್ನು ಕಾಡುತ್ತಿರುವ ರೋಗಗಳಲ್ಲಿ ಮಧುಮೇಹವು ಪ್ರಮುಖವಾದದ್ದಲ್ಲದೇ ಉದಾಸೀನ ಮಾಡಿದರೆ ತೀವ್ರವಾದ ಬಹು ಅಂಗಾಂಗಳ ವೈಫಲ್ಯಗಳಿಗೂ ಕಾರಣವಾಗಬಹುದಾದ ಭಯಂಕರ ಸಮಸ್ಯೆಯಾಗಿದೆ. ನಿರಂತರವಾದ ಎಚ್ಚರಿಕೆ ಹಾಗೂ ಸೂಕ್ತವಾದ ಚಿಕಿತ್ಸಾಕ್ರಮಗಳ ಅವಶ್ಯಕತೆ ಹೆಚ್ಚಿರುವ ಈ ಆರೋಗ್ಯ ಸಮಸ್ಯೆಯ ಬಗ್ಗೆ ಜನರಿಗೆ ಮಾಹಿತಿಗಳನ್ನು ಒದಗಿಸಿ ಅವರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನವೆಂಬರ್ 14ರಂದ ವಿಶ್ವಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೊದಲೇ ತಿಳಿಸಿರುವಂತೆ ಅರೋಗ್ಯಕರ ಆಹಾರ ಪದ್ಧತಿ, ಹಿತ-ಮಿತವಾದ ವ್ಯಾಯಾಮಗಳು, ಹಾಗೂ ಧ್ಯಾನ ಮುಂತಾದ ನಿತ್ಯದ ಅಭ್ಯಾಸಗಳಿಂದ ಇದರ ಮೇಲೆ ಹಿಡಿತಹೊಂದಿ ನೆಮ್ಮದಿಯ ದೀರ್ಘ ಬಾಳುವೆಯನ್ನು ನಡೆಸಬಹುದಾಗಿದೆ.
ಕಂದು ಅಕ್ಕಿಯ ಅನ್ನದ ಪ್ರಯೋಜನಗಳನ್ನು ಸಂಶೋಧನೆಗಳ ಮೂಲಕ ದಾಖಲಿಸಲಾಗಿದ್ದು ಪರಿಣತರಿಂದಲೂ ಅನುಮೋದನೆ ಪಡೆದ ವಿಧಾನವಾಗಿರುವುದರ ಜೊತೆಗೆ ಮಾನವ ದೇಹಕ್ಕೆ ಹೊಂದಿಕೊಳ್ಳುವಂತಹದಾಗಿದೆ. ಮಧುಮೇಹ ರೋಗಿಗಳಿಗೆ ತಮ್ಮ ದೇಹದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಇದು ಬಿಳಿ ಅಕ್ಕಿಯ ಅನ್ನಕ್ಕಿಂತಲೂ ಹೆಚ್ಚು ಉಪಯುಕ್ತವಾಗಿದೆ. ಕಂದು ಅಕ್ಕಿಯ ಅನ್ನವು ಕಡಿಮೆ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ಆಹಾರ ಪದಾರ್ಥಗಳು ಮಾನವ ದೇಹದ ಸಕ್ಕರೆಯ ಮಟ್ಟದಮೇಲೆ ಬೀರುವ ಪ್ರಭಾವವನ್ನು ಅಳೆಯುವ ಸೂಚ್ಯಂಕವೇ ಈ ಗ್ಲೈಸೀಮಿಕ್ ಗುಣಾಂಕವಾಗಿದೆ. ಕಡಿಮೆ ಮಟ್ಟದ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿರುವ ಆಹಾರ ಪದಾರ್ಥಗಳು ಮಾನವನ ದೇಹದ ಸಕ್ಕರೆಯ ಮಟ್ಟದ ಮೇಲೆ ಅತಿ ಕಡಿಮೆ ಪ್ರಭಾವವನ್ನು ಬೀರುತ್ತವೆ. ಇಷ್ಟು ಮಾತ್ರವಲ್ಲದೇ, ಕಂದು ಅಕ್ಕಿಯಲ್ಲಿ ಬಿಳಿಯ ಅಕ್ಕಿಗಿಂತ ಹೆಚ್ಚಿನ ಮಟ್ಟದ ಫೈಬರ್ ಅಂಶವಿದ್ದು ಇದೂ ಒಂದು ಪ್ರಯೋಜನಕಾರಿ ಅಂಶವಾಗಿದೆ. ಕಂದು ಅಕ್ಕಿಯು ಕಡಿಮೆ ಗ್ಲೈಸೀಮಿಕ್ ಗುಣಾಂಕವನ್ನು ಹೊಂದಿದ್ದು ಸಕ್ಕರೆಯ ಅಂಶವನ್ನು ಬಹು ನಿಧಾನವಾಗಿ ರಕ್ತಕ್ಕೆ ಬಿಡುವುದರಿಂದ ಕಡಿಮೆ ಮಟ್ಟದ ಸಕ್ಕರೆಯನ್ನು ಅರಗಿಸಿಕೊಳ್ಳುವುದು ಹಾಗೂ ಹೊರಹಾಕುವುದು ದೇಹಕ್ಕೆ ಬಹಳ ಸುಲಭವಾಗಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವು ತೀವ್ರವಾಗಿ ಏರಿಕೆಯಾಗುವುದನ್ನು ಇದು ತಪ್ಪಿಸುತ್ತದೆ.
ಸೂಚನೆ: ನೀವೇನಾದರೂ ಮಧುಮೇಹಿಗಳಾಗಿದ್ದರೆ ಯಾವುದೇ ಹೊಸ ಆಹಾರವನ್ನು ನಿಮ್ಮ ಆಹಾರ ಪದ್ಧತಿಗೆ ಸೇರಿಸಿಕೊಳ್ಳುವ ಮುನ್ನ ನಿಮ್ಮ ಮಧುಮೇಹ ತಜ್ಞರನ್ನು ಭೇಟಿಯಾಗಿ ಅವರ ಸಲಹೆಯಂತೆ ಮುನ್ನಡೆಯಿರಿ ಹಾಗೂ ಹಿತ-ಮಿತವಾದ ವ್ಯಾಯಾಮ ಹಾಗ ಧ್ಯಾನಗಳನ್ನು ಆಚರಿಸಿ. ಈ ಲೇಖನದಲ್ಲಿರುವ ಅಂಶಗಳು ಕೇವಲ ಸಾಮಾನ್ಯ ಸಲಹೆಗಳಾಗಿದ್ದು ನಿಮಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರ ಸಲಹೆ-ಸೂಚನೆಗಳೇ ಅಂತಿಮ.
World Diabetes Day is celebrated in order to raise the awareness level of the people on healthy lifestyle and ways to fight diabetes
ಇದನ್ನೂ ಓದಿ: Ashwagandha: ಹಾಲಿನೊಂದಿಗೆ ಅಶ್ವಗಂಧ – ಆರೋಗ್ಯಕರ ಲಾಭಗಳು
ಇದನ್ನೂ ಓದಿ: Ayurveda Day :ಆಯುಷ್ ಕ್ಷೇಮ ಕೇಂದ್ರಗಳ ಮೂಲಕ ಆರೋಗ್ಯವಂತರನ್ನಾಗಿಸುವುದು ಕೇಂದ್ರದ ಆಶಯ
Discussion about this post