ಚಿಕ್ಕಮಗಳೂರು: ಪರಿಸರವಾದಿ ಡಿ.ವಿ.ಗಿರೀಶ್ ಮೇಲಿನ ಹಲ್ಲೆ ಜತೆಗೆ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿ ಕೈಹಿಡಿದು ಎಳೆದಾಡಿದ ಆರೋಪದ ಮೇಲೆ ಭಾರತೀಯ ದಂಡಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯಡಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು.
ಈ ಸಂಬಂಧ ಶುಕ್ರವಾರ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಚಿಕ್ಕಮಗಳೂರು ತಾಲ್ಲೂಕಿನ ಕಂಬಿಹಳ್ಳಿ ಬಳಿ ಪರಿಸರವಾದಿ ಡಿ.ವಿ ಗಿರೀಶ್ ಹಾಗೂ ಸ್ನೇಹಿತರುಗಳು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲವು ಯುವಕರು ಮದ್ಯದ ಅಮಲಿನಲ್ಲಿ ಜೀಪಿನಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ಚುಡಾಯಿಸಿ ಅವಾಚ್ಯವಾಗಿ ನಿಂದಿಸಿದಾಗ ಇದನ್ನು ಪ್ರಶ್ನಿಸಿದ್ದಕ್ಕೆ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದರು ಅಲ್ಲದೇ ಬಾಲಕಿಯ ಕೈಹಿಡಿದು ಎಳೆದಾಡಲು ಮುಂದಾಗಿದ್ದರು ಎಂಬ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳೆಲ್ಲರೂ ಟಿಂಬರ್, ಗಣಿ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಇದ್ದವರು. ಆ.30 ರಸಂಜೆ ವೇಳೆಯಲ್ಲಿ ಗಿರೀಶ್ ತನ್ನ ಸ್ನೇಹಿತರೊಂದಿಗೆ ಜೀಪಿನಲ್ಲಿ ತೆರಳಿದ್ದಾಗ ಘಟನೆ ನಡೆದಿದೆ. ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರ ಗುಂಪು ಬೈಕ್ ಮೂಲಕ ಹಿಂಬಾಲಿಸಿಕೊಂಡು ಬಂದು ಜೀಪನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.
ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡು ರಾಜ್ಯದ ವಿವಿದೆಡೆ ಸಂಚರಿಸುತ್ತಿದ್ದ ಕಾರಣ ಅವರನ್ನು ಪತ್ತೇಹಚ್ಚಲು ಪಿಐ ಸ್ವರ್ಣ ಜಿ.ಎಸ್, ಗ್ರಾಮಾಂತರ ಠಾಣೆ ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ಕುಮಾರ್ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್ಪಿ ಜಿ.ತಲಕಟ್ಟಿಯವರ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ 2 ಮಂದಿಯನ್ನು, ಬೆಂಗಳೂರಿನಲ್ಲಿ 3, ಹಾಗೂ ಸಂತವೇರಿಯಲ್ಲಿ ಓರ್ವನನ್ನು ಸೇರಿ ಒಟ್ಟು 7 ಮಂದಿ ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಲಾಗಿದೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಲ್ಲೆನಡೆಸಿ ಆರೋಪಿಗಳು ಹೊಸಪೇಟೆ, ಸಂತವೇರಿ, ಹಾಗೂ ಕಂಬಿಹಳ್ಳಿಯವರಾಗಿದ್ದು, ಪ್ರವಾಸಿಗರಿಗೆ, ದಾರಿಹೋಕರಿಗೆ, ಆಗಾಗ ಸಣ್ಣಪುಟ್ಟ ಕಿರಿಕಿರಿ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಯನ್ನು ನಿಂದಿಸಿ ಕೈಹಿಡಿದು ಎಳೆದಾಡಲು ಮುಂದಾದ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯು ಭೌಗೋಳಿಕವಾಗಿ, ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದು ಇಲ್ಲಿಗೆ ವಿವಿದೆಡೆಯಿಂದ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಸೌಜನ್ಯಯುತವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಧರ್ಮ ಆದರೆ ಸ್ಥಳೀಯರು ಈ ರೀತಿಯ ದುರ್ವತನೆ ತೋರುವುದು ಜಿಲ್ಲೆಗೆ ಕಪ್ಪುಚುಕ್ಕೆಯಿದ್ದಂತೆ ಇಂತಹ ಹಲ್ಲೆ, ದೌರ್ಜನ್ಯಗಳಿಗೆ ಕಾನೂನು ಕ್ರಮದ ಮೂಲಕ ಕಡಿವಾಣ ಹಾಕಲಾಗುವುದು ಎಂದು ಎಚ್ಚರಿಸಿದರು.
ಆನ್ಲೈನ್ ಮೂಲಕ ಜನರಿಂದ ಹಣವಂಚನೆಗೆ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಲ್ಲಿ ಅದಕ್ಕೆ ಸ್ಪಂದಿಸಬೇಡಿ, ಓಟಿಪಿ ಅಕೌಂಟ್ಸಂಖ್ಯೆ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಬೇಡಿ. ಈ ರೀತಿಯಾಗಿ ಅಪರಿಚಿತ ಕರೆಗಳು ಬಂದಲ್ಲಿ ಕೂಡಲೇ ಸೈಬರ್ಕ್ರೈಮ್ಗೆ ದೂರು ನೀಡುವಂತೆ ಸಲಹೆ ನೀಡಿದರು. ಬ್ಯಾಂಕ್ ಹೆಸರೇಳಿಕೊಂಡು ವಂಚನೆ ಮಾಡುತ್ತಿರುವ ಬಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದರು.
ಹಲ್ಲೆ ನಡೆಸಿದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎ.ಎಸ್ಐ ಸುರೇಶ್, ಸಿಬ್ಬಂದಿಳಾದ ಹಾಲಪ್ಪ, ರಮೇಶ್, ಭರತ್, ಭೂಷಣ್, ಸಿದ್ದೇಶ, ಗಿರೀಶ್, ಮಂಜುನಾಥ, ನಾಗರತ್ನಮ ಬಸವರಾಜ್ ಉಪಸ್ಥಿತರಿದ್ದರು. ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪ್ರಶಂಸ ಪತ್ರ ನೀಡುವ ಮೂಲಕ ವೈಯಕ್ತಿಕವಾಗಿ ಬಹುಮಾನ ನೀಡಿದರು.
ಮೋಟಾರ್ ಬೈಕ್ ಮನೆಗಳ್ಳತನ ಮತ್ತಿತರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರತಿ ವಾರ್ಡ್ಗಳಲ್ಲಿ 25 ರಿಂದ 30 ಮನೆಗಳಿಗೆ ಒಂದರಂತೆ ಸಿ.ಸಿ.ಟಿ.ವಿ ಅಳವಡಿಸಿಕೊಳ್ಳುವುದು ಒಳಿತು ಇದಕ್ಕಾಗಿ ಪೊಲೀಸ್ ಇಲಾಖೆಯೂ ಸಹಕಾರ ನೀಡಲಿದೆ, ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಪ್ರಮುಖ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಅಳವಡಿಕೆ ಸಂಬಂಧ ನೆರವು ನೀಡಿದೆ ಎಂದು ತಿಳಿಸಿದರು.
ಹಲ್ಲೆ ಸಂಬಂಧ ಪರಿಸರವಾದಿ ಗಿರೀಶ್ ಮಾತನಾಡಿ ಸಂತವೇರಿ ತಿರುವಿನಲ್ಲಿ ನಾನು ನನ್ನ 6 ಮಂದಿ ಸ್ನೇಹಿತರು ಜೀಪಿನಲ್ಲಿ ಬರುವ ವೇಳೆ ನನ್ನ ಸ್ನೇಹಿತನ ಮಗಳಿಗೆ ಯುವಕರ ಗುಂಪು ಅವಾಚ್ಯವಾಗಿ ನಿಂದಿಸಿ ಚೂಡಾಯಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಥಳಿಸಿ ಹಲ್ಲೆ ನಡೆಸಲಾಗಿದೆ. ಅಲ್ಲದೇ ಜೀಪಿಗೂ ಕಲ್ಲು ತೂರಾಟ ಮಾಡಿ ದಾಂದಲೆ ನಡೆಸಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಐ ಸ್ವರ್ಣ ಜಿ.ಎಸ್, ಗ್ರಾಮಾಂತರ ಠಾಣೆ ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ಕುಮಾರ್ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್ಪಿ ಜಿ. ತಲಕಟ್ಟಿ ಸೇರಿದಂತೆ ಮತ್ತಿತರರು ಇದ್ದರು

























Discussion about this post