ಅಬುದಾಭಿ: ಏರಿಳಿತಗಳಿಂದ ಕೂಡಿದ ಈ ವರ್ಷ ತುಂಬಾ ಪಾಠ ಕಲಿತಿದ್ದೇವೆ ಎಂದು ಐಪಿಎಲ್ ಟಿ–20 ಟೂರ್ನಿಯಿಂದ ಮುಂಬೈ ಇಂಡಿಯನ್ಸ್ ನಿರ್ಗಮಿಸಿದ ಬಳಿಕ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರೂ ಪ್ಲೇ ಆಫ್ಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ತಲಾ ಏಳು ಗೆಲುವು ಹಾಗೂ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಒಟ್ಟು 14 ಅಂಕಗಳನ್ನು ಕಲೆ ಹಾಕಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಇಷ್ಟೇ ಅಂಕಗಳನ್ನು ಕಲೆಹಾಕಿತ್ತು. ಆದರೆ, ರನ್ರೇಟ್ ಹೆಚ್ಚಿರುವ ಕಾರಣಕ್ಕೆ ಕೋಲ್ಕತ್ತಾ ಪ್ಲೇ ಆಫ್ ಪ್ರವೇಶಿಸಿತ್ತು.
ಇದನ್ನೂ ಓದಿ: Samantha Divorce: ಚಿತ್ರರಂಗದಲ್ಲಿ ಸದ್ದು ಮಾಡಿದ ಐದು ವಿಚ್ಛೇದನಗಳು, ಪ್ರತಿಸಲವೂ ಹೆಣ್ಣಿನ ಮೇಲೆ ದೋಷಾರೋಪ ಏಕೆ?
ಕೂಟದಿಂದ ನಿರ್ಗಮಿಸಿದ ಬಳಿಕ ಫ್ರಾಂಚೈಸಿ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಇನ್ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿರುವ ರೋಹಿತ್ ಶರ್ಮಾ, ‘ಏರಿಳಿತಗಳಿಂದ ಕೂಡಿದ ಈ ವರ್ಷದಲ್ಲಿ ತುಂಬಾ ಪಾಠಗಳನ್ನು ಕಲಿತಿದ್ದೇವೆ. ನಮ್ಮ ತಂಡವು ಕಳೆದ 3–4 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಈ ಬಾರಿಯ ಟೂರ್ನಿಯ 14 ಪಂದ್ಯಗಳು ಮರೆಮಾಚಲಾರವು. ನೀಲಿ ಹಾಗೂ ಚಿನ್ನದ ಪೋಷಾಕು ಧರಿಸಿದ ಎಲ್ಲ ಆಟಗಾರರೂ ಹೆಮ್ಮೆಯಿಂದ ಆಡಿದ್ದಾರೆ. ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಹಾಗಾಗಿಯೇ ನಾವು ಒಂದು ಕುಟುಂಬವಾಗಿ ರೂಪುಗೊಂಡಿದ್ದೇವೆ’ ಎಂದು ಉಲ್ಲೇಖಿಸಿದ್ದಾರೆ.
ಭಾರತ–ಪಾಕ್ ಪಂದ್ಯದ ಟಿಕೆಟ್ ಕೊಡಿಸಿ: ಅಭಿಮಾನಿಯ ಮನವಿ!
ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯ ಮೊನ್ನೆ ಶುಕ್ರವಾರ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆದಿತ್ತು. ಈ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಅಭಿಮಾನಿಯೊಬ್ಬರು, ‘ರೋಹಿತ್, ಭಾರತ – ಪಾಕಿಸ್ತಾನ ಪಂದ್ಯದ ಎರಡು ಟಿಕೆಟ್ಗಳು ಬೇಕಾಗಿವೆ. ದಯಮಾಡಿ ಕೊಡಿಸಿ…’ ಎಂಬ ಪ್ಲೇಕಾರ್ಡ್ ಹಿಡಿದು ನಿಂತಿದ್ದರು. ಐಸಿಸಿ ಟಿ–20 ವಿಶ್ವಕಪ್ ಪಂದ್ಯವನ್ನು ಉದ್ದೇಶಿಸಿ ಅಭಿಮಾನಿ ಮನವಿ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 24ರಂದು ಭಾರತ–ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಎಲ್ಲ ಟಿಕೆಟ್ಗಳೂ ಈಗಾಗಲೇ ಮಾರಾಟವಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
Discussion about this post