ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಸ್ಕಾಟ್ಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ತಂಡವು ಅತ್ಯುತ್ತಮ ರನ್ರೇಟ್ ಕಾಯ್ದುಕೊಂಡಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಎಲ್ಲವನ್ನೂ ಅಂದುಕೊಂಡಂತೆಯೇ ಅನುಷ್ಠಾನಗೊಳಿಸಿತು. ರವೀಂದ್ರ ಜಡೇಜ (15ಕ್ಕೆ 3), ಮೊಹಮ್ಮದ್ ಶಮಿ (15ಕ್ಕೆ 3) ಸೇರಿದಂತೆ ಟೀಂ ಇಂಡಿಯಾ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್, 17.4 ಓವರ್ಗಳಲ್ಲಿ ಕೇವಲ 85 ರನ್ನಿಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ: ದೊಡ್ಡ ಗೌರವ ಎಂದ ‘ವಾಲ್’
ಸೆಮಿ ಫೈನಲ್ ಆಸೆ ಜೀವಂತವಾಗಿ ಇರಿಸಿಕೊಳ್ಳಬೇಕಾದರೆ 7.1 ಓವರ್ ಒಳಗೆ ಗುರಿ ತಲುಪಬೇಕೆಂಬುದನ್ನು ಅರಿತಿದ್ದ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭದಿಂದಲೇ ಅಬ್ಬರಿಸತೊಡಗಿದರು. ಪರಿಣಾಮವಾಗಿ ಕೇವಲ 6.3 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಂಡವು ಗುರಿ ತಲುಪಿತು. ಇದರಲ್ಲಿ ರಾಹುಲ್ ಅವರ ಅಬ್ಬರದ ಅರ್ಧಶತಕವೂ ಸೇರಿತ್ತು. ಇದರಿಂದಾಗಿ ತಂಡವೀಗ ರನ್ರೇ ಟ್ನಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನವನ್ನು ಮೀರಿಸಿದ್ದು, +1.619 ರನ್ರೇಟ್ ಕಾಯ್ದುಕೊಂಡಿದೆ.
ಈಗ ಎಲ್ಲರ ಚಿತ್ತ ಭಾನುವಾರ ನಡೆಯಲಿರುವ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಮೇಲೆ ನೆಟ್ಟಿದೆ. ಈ ಪದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರೆ ಭಾರತದ ಸೆಮಿಫೈನಲ್ ಪ್ರವೇಶದ ಕನಸಿಗೆ ಬಲ ಬರಲಿದೆ. ಆದರೆ, ಇದಕ್ಕೆ ಭಾರತವು ಮುಂದಿನ ನಮೀಬಿಯಾ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲಬೇಕಾದ ಅನಿವಾರ್ಯತೆಯಂತೂ ಇದೆ.
Discussion about this post