ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ರಾತ್ರಿ ನಡೆದ ಎರಡನೇ ಗುಂಪಿನ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 9 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾವು ತನ್ನ ವಿಶ್ವಕಪ್ ಅಭಿಯಾನಕ್ಕೆ ಅಂತ್ಯ ಹಾಡಿದೆ.
ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ, ಬಳಿಕ ಬಹುಮುಖ್ಯವಾದ ಪಂದ್ಯಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿತ್ತು ಟೀಮ್ ಇಂಡಿಯಾ.
ಈ ಸೋಲಿಗೆ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದೇ ಕಾರಣ ಎಂದು ನಿರ್ಗಮಿತ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಈ ವಯಸ್ಸಿನಲ್ಲಿ ಮಾನಸಿಕವಾಗಿ ಬಳಲಿದ್ದೇನೆ ಎಂದರೆ ಒಪ್ಪಬಹುದು. ಆದರೆ ಈ ಹುಡುಗರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಳಲಿದ್ದಾರೆ. ಅವರೆಲ್ಲಾ ಐಪಿಎಲ್ ಟೂರ್ನಿಯ ಕಾರಣದಿಂದ ಆರು ತಿಂಗಳುಗಳಿಂದ ಬಯೋಬಲ್ನಲ್ಲಿದ್ದರು. ಐಪಿಎಲ್ ಟೂರ್ನಿ ಮತ್ತು ವಿಶ್ವಕಪ್ ನಡುವೆ ಅಂತರ ಬೇಕಿತ್ತು. ದೊಡ್ಡಮಟ್ಟದ ಟೂರ್ನಿಗಳನ್ನು ಆಡುವಾಗ ಆಟಗಾರರ ಮೇಲೆ ಸಹಜವಾಗಿ ಒತ್ತಡ ಇರುತ್ತದೆ. ಅಂತಹ ಪಂದ್ಯಗಳಿಗೆ ಯಾವ ರೀತಿ ಸಿದ್ಧವಾಗಬೇಕೋ ಹಾಗೆ ತಯಾರಾಗಲು ಆಟಗಾರರಿಗೆ ಸಾಧ್ಯವಾಗಿಲ್ಲ’ ಎಂದು ಹೇಳಿದ್ದಾರೆ.
ಓದಿ: ಐಪಿಎಲ್ಗಿಂತ ದೇಶಕ್ಕಾಗಿ ಆಡುವುದಕ್ಕೆ ಗಮನ ನೀಡಿ: ಟೀಂ ಇಂಡಿಯಾ ಆಟಗಾರರ ವಿರುದ್ಧ ಕಪಿಲ್ ದೇವ್ ಗರಂ
‘ಸೋಲಿಗೆ ನೆಪಗಳನ್ನು ಹೇಳಿ ಸಮರ್ಥಿಸಿಕೊಳ್ಳಬೇಕು ಎಂಬುದು ನನ್ನ ಉದ್ದೇಶವಲ್ಲ. ಆಟದಲ್ಲಿ ಸೋಲು-ಗೆಲುವು ಸಹಜ. ಆದರೆ ಟೀಂ ಇಂಡಿಯಾ ಆಟಗಾರರು ಗೆಲುವಿಗಾಗಿ ಪ್ರಯತ್ನಿಸಲೇ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲದೆ, ಆಟಗಾರರಿಗೆ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐ ಆಡಳಿತ ಮಂಡಳಿ ಜೊತೆ ಮನವಿ ಮಾಡುವುದು ತಮ್ಮ ಕೆಲಸವಲ್ಲ ಎಂದೂ ಅವರು ಹೇಳಿದ್ದಾರೆ. ತಂಡದ ಮುಖ್ಯ ಕೋಚ್ ಆಗಿ ಐದು ವರ್ಷಗಳ ಕಾಲ ಆಟಗಾರರ ಜೊತೆ ಪಾರದರ್ಶಕವಾಗಿ ಮತ್ತು ಹೊಂದಾಣಿಕೆಯಿಂದ ನಡೆದುಕೊಂಡಿದ್ದೇನೆ. ಹಿರಿಯ–ಕಿರಿಯ ಎಂಬ ಭೇದ ಮಾಡಿಲ್ಲ. ತಂಡದ ಎಲ್ಲಾ ಆಟಗಾರರನ್ನು ಒಂದೇ ರೀತಿ ನೋಡಿಕೊಂಡಿದ್ದೇನೆ. ಅಲ್ಲದೆ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಮತ್ತೆ ವಿಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳುವ ಬಯಕೆ ಹೊಂದಿರುವುದಾಗಿಯೂ ಅವರು ಹೇಳಿದ್ದಾರೆ. ಟೀಂ ಇಂಡಿಯಾ ಕೋಚ್ ಆಗಿ ಜವಾಬ್ದಾರಿ ವಹಿಸಿ ಕೊಳ್ಳುವುದಕ್ಕೂ ಮುನ್ನ ಶಾಸ್ತ್ರಿಯವರು ಕ್ರಿಕೆಟ್ ವಿಕ್ಷಕವಿವರಣೆಗಾರನಾಗಿ ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ವಿಶ್ವಕಪ್ ಗೆದ್ದಾಗ ಶಾಸ್ತ್ರಿಯವರು ವಿಕ್ಷಕ ವಿವರಣೆಗಾರನಾಗಿದ್ದರು.
ಐಪಿಎಲ್ ಬಯೋಬಬಲ್ನಿಂದ ಬಳಲಿದ್ದಾಗಿಯೂ ವಿಶ್ರಾಂತಿ ಬೇಕಾಗಿತ್ತೆಂದೂ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇತ್ತೀಚೆಗೆ ಹೇಳಿದ್ದರು. ಅದರ ಬೆನ್ನಲ್ಲೇ ತಂಡದ ಬೌಲಿಂಗ್ ಕೋಚ್ ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕೂಡ ಟೀಂ ಇಂಡಿಯಾ ವಿರುದ್ಧ ಸೋಮವಾರವಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು. ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್ಗೆ ಹೆಚ್ಚು ಮಹತ್ವ ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದರು. ಸರಿಯಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಯೋಜನೆರೂಪಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ ಎಂದೂ ಹೇಳಿದ್ದರು. ಪಾಕಿಸ್ತಾನ ವಿರುದ್ಧ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆಗೂ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ಸೇರಿದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು.
ಇನ್ನಷ್ಟು ಓದಿಗಾಗಿ…
ICC T20 WC: ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ಗೆ ಭರ್ಜರಿ ಗೆಲುವು, ಭಾರತದ ಸೆಮಿಫೈನಲ್ ಕನಸು ಭಗ್ನ
‘ಹ್ಯಾಪಿ ಬರ್ತ್ಡೇ ಮೈ ಲವ್’: ಆಥಿಯಾ ಶೆಟ್ಟಿ ಜತೆಗಿನ ಬಾಂಧವ್ಯ ದೃಢಪಡಿಸಿದ ಕೆ.ಎಲ್.ರಾಹುಲ್ ಇನ್ಸ್ಟಾಗ್ರಾಂ ಪೋಸ್ಟ್
ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ: ದೊಡ್ಡ ಗೌರವ ಎಂದ ‘ವಾಲ್’
Discussion about this post