Chanakya Life Story: ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಖ್ಯಾತರಾದ ಚಾಣಕ್ಯರು ಚಣಕರ ಮಗ. ಬುದ್ಧಿವಂತನಾಗಿದ್ದ ಚಾಣಕ್ಯ ಮನುಷ್ಯರು ಜೀವನದಲ್ಲಿ ಉದ್ಧಾರವಾಗಬೇಕು, ಕೆಲಸದಲ್ಲಿ ಯಶಸ್ಸು ಗಳಿಸಬೇಕಂದ್ರೆ ಹೇಗಿರಬೇಕು, ಕೌಟುಂಬಿಕ ಜೀವನವನ್ನ ಹೇಗೆ ಉತ್ತಮವಾಗಿ ನಿಭಾಯಿಸಬೇಕು ಅನ್ನೋ ಬಗ್ಗೆ ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಇಂಥ ಚಾಣಕ್ಯರ ಸಹಾಯ ಪಡೆದ ಚಂದ್ರಗುಪ್ತ ಮೌರ್ಯ ರಾಜನಾಗಿದ್ದು ಹೇಗೆ..? ಅನ್ನೋ ಬಗ್ಗೆ ಚಿಕ್ಕ ಕಥೆಯನ್ನ ಕೂಡ ನಾವು ಹೇಳಲಿದ್ದೇವೆ.
ನಾಲಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದ ಚಾಣಕ್ಯರು, ಚಂದ್ರಗುಪ್ತ ಮೌರ್ಯನಿಗೆ (Chandraguptha Mourya) ರಾಜನಾಗಲು ಸಹಾಯ ಮಾಡಿದ್ದರು. ತನ್ನ ಯವ್ವನಾವಸ್ಥೆಯಲ್ಲಿ ಕೆಲಸಕ್ಕಾಗಿ ಹೆಣಗಾಡುತ್ತಿದ್ದ ಚಂದ್ರಗುಪ್ತನಿಗೆ ಸಕಲ ಸಲಹೆಗಳನ್ನು, ತರಬೇತಿಗಳನ್ನು ನೀಡಿ, ರಾಜ್ಯ ಗೆದ್ದು, ರಾಜನಾಗಿ ಉತ್ತಮ ಆಡಳಿತಗಾರನಾಗಲು ಚಾಣಕ್ಯರು ಸಹಾಯ ಮಾಡಿದ್ದರು. ಇಂದು ನಮ್ಮ ಕೇಂದ್ರ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ, ಗೃಹ ಮಮಂತ್ರಿ, ಹಣಕಾಸು ಸಚಿವ, ರಕ್ಷಣಾ ಸಚಿವ, ವಿದೇಶಾಂಗ ಸಚಿವ ಅಂತಾ ಹಲವಾರು ಸಚಿವರಿದ್ದಾರೆ. ಆದ್ರೆ ಚಂದ್ರಗುಪ್ತರ ಕಾಲದಲ್ಲಿ ಈ ಎಲ್ಲ ಸಚಿವ ಸ್ಥಾನಗಳನ್ನ ಚಾಣಕ್ಯರೇ ನಿಭಾಯಿಸುತ್ತಿದ್ದರು. ಅವರೊಂಥರ ಮೌರ್ಯ ಸಾಮ್ರಾಜ್ಯದ ಅಡಿಪಾಯವಾಗಿದ್ದರು.
ಇದರ ಜೊತೆಗೆ ಚಾಣಕ್ಯರು ಓರ್ವ ಉತ್ತಮ ಸಮುದ್ರ ಶಾಸ್ತ್ರ ಬಲ್ಲ ವ್ಯಕ್ತಿಯಾಗಿದ್ದರು. ಅರಮನೆಗೆ ಬಂದ ವ್ಯಕ್ತಿಯೊಂದಿಗೆ ಮಾತನಾಡುವಾಗ ಅವರ ಮುಖವನ್ನು ನೋಡಿ, ಆ ವ್ಯಕ್ತಿ ಏನನ್ನು ಯೋಚಿಸುತ್ತಿದ್ದಾನೆಂದು ಅರ್ಥ ಮಾಡಿಕೊಳ್ಳಬಲ್ಲ ಚಾಣಕ್ಷರಾಗಿದ್ದರು. ತಕ್ಷಶಿಲೆಯ ಪ್ರಧಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಚಾಣಕ್ಯರು, ಸಕಲ ವಿದ್ಯಾ ಪಾರಂಗತರಾಗಿದ್ದರು.
ಹೀಗಿರುವಾಗ ಒಂದೆಡೆಯಿಂದ ಪ್ರಪಂಚವನ್ನೇ ಗೆದ್ದು, ಭಾರತವನ್ನೂ ಗೆಲ್ಲಬೇಕೆಂದು ಬರುತ್ತಿದ್ದ ಸಿಕಂದರ್ ಬಗ್ಗೆ ಚಾಣಕ್ಯನಿಗೆ ವಿಷಯ ಮುಟ್ಟಿತ್ತು. ಅದಕ್ಕಾಗಿ ಸಿಕಂದರ್ನನ್ನು ಬಗ್ಗುಬಡಿಯಲು ಓರ್ವ ರಾಜನನ್ನು ಸಿದ್ಧಗೊಳಿಸಲು ನಿರ್ಧರಿಸಿದ ಚಾಣಕ್ಯರು, ಮಗಧ ರಾಜಾ ಧನನಂದನನ ಬಳಿ ತೆರಳಿದರು. ಆದರೆ ರಾಜ ಈ ವಿಷಯ ಕೇಳಿ ಚಾಣಕ್ಯರನ್ನು ಕಂಡು ಅಪಹಾಸ್ಯ ಮಾಡಿ, ಅವಮಾನ ಮಾಡಿ ಕಳುಹಿಸಿದ.
ಆಗ ಧನನಂದನ ಸೊಕ್ಕು ಮುರಿಯಬೇಕು, ಭಾರತವನ್ನು ಸಿಕಂದರ್ನಿಂದ ರಕ್ಷಿಸಬೇಕು ಎಂದು ಪಣತೊಟ್ಟ ಚಾಣಕ್ಯರು, ತಮ್ಮ ಬಳಿ ಕೆಲಸ ಮಾಡುತ್ತಿದ್ದ 18ರ ಯುವಕ ಚಂದುವನ್ನು ಕರೆದು ಆತನಿಗೆ ರಾಜನಾಗುವ, ಯುದ್ಧ ಗೆಲ್ಲುವ, ಶತ್ರುವನ್ನು ಎದುರಿಸುವ ತರಬೇತಿ ಕೊಟ್ಟು, ಸಿಕಂದರ್ ವಿರುದ್ಧ ಯುದ್ಧ ಮಾಡಲು ಸಿದ್ಧಪಡಿಸುತ್ತಾರೆ. ಆದರೆ ಯುದ್ಧಕ್ಕೆ ಕಳುಹಿಸುವುದಿಲ್ಲ. ಬದಲಾಗಿ ಸಿಕಂದರ್ ಸೇನೆ ಸೇರುವಂತೆ ಚಂದುವನ್ನು ಕಳುಹಿಸುತ್ತಾರೆ. ಯಾಕಂದ್ರೆ ಶತ್ರುವಿನ ದುರ್ಬಲತೆ ಏನೆಂದು ತಿಳಿಯಬೇಕಂದ್ರೆ, ಆತನೊಂದಿಗೆ ಗೆಳೆತನ ಮಾಡಬೇಕು ಅನ್ನೋದು ಚಾಣಕ್ಯರ ಅಂಬೋಣ. ಹಾಗಾಗಿ ಚಂದುವನ್ನ ಸೇರಿಸಿ 20 ಸೈನಿಕರನ್ನು ಸಿಕಂದರ್ ಸೇನೆ ಸೇರುವಂತೆ ಮಾಡುತ್ತಾರೆ.
ಸಿಕಂದರ್ ಸೇನೆ ಸೇರಿದ ಚಾಣಕ್ಯರ ಪಡೆಯ ಯುವಕರು, ಸಿಕಂದರ್ ಸೇನೆಯ ಸೈನಿಕರಿಗೆ ಮಾತಿನ ಮೂಲಕ ಮಾನಸಿಕ ಕಿರಿಕಿರಿ ನೀಡಲು ಆರಂಭಿಸಿದರು. ಆಗಿನ್ನೂ ಸಿಕಂದರ್ ಭಾರತಕ್ಕೆ ಕಾಲೂ ಕೂಡ ಇಟ್ಟಿರಲಿಲ್ಲ. ಅದಾಗಲೇ ಸಿಕಂದರ್ ಸೈನಿಕರು ದೈಹಿಕವಾಗಿ ಬಲಹೀನರಾಗಿದ್ದರು. ಅವರನ್ನ ಮಾನಸಿಕವಾಗಿಯೂ ಬಲಹೀನ ಮಾಡಲು ನಿರ್ಧರಿಸಿದ ಚಾಣಕ್ಯರ ಪಡೆಯವರು, ಭಾರತದ ದೇವಾನುದೇವತೆಗಳು ನಮ್ಮ ಮೇಲೆ ಮುನಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಸೇನೆಯಲ್ಲಿ ಕೆಲ ಅಹಿತಕರ ಘಟನೆಗಳು ನಡೆಯುತ್ತಿದೆ ಎಂದು ಹೇಳುತ್ತಾರೆ. ಈ ರೀತಿಯ ಮಾತುಗಳಿಂದ ಸಿಕಂದರ್ನ ಸೈನಿಕರನ್ನು ಹೆದರಿಸುವುದಲ್ಲದೇ, ನಿಧಾನವಾಗಿ ಊಟದಲ್ಲಿ ವಿಷ ಬೆರೆಸುವುದು, ಸೈನಿಕರ ಬಟ್ಟೆಗಳನ್ನು ಸುಟ್ಟು ಹಾಕುವುದು, ಸಿಕಂದರ್ ಸೈನ್ಯದಲ್ಲಿ ಬೇಧ ಭಾವ ಮೂಡಿಸಿ, ಜಗಳ ಆಗುವಂತೆ ಮಾಡುವುದು. ಅವರವರೇ ಬಡಿದಾಡುಕೊಂಡು ಸಾಯುವಂತೆ ಮಾಡುವುದು ಇತ್ಯಾದಿ ಕೆಲಸಗಳನ್ನು ಚಾಣಕ್ಯನ ಸೈನಿಕರು ಮಾಡಲಾರಂಭಿಸಿದರು. ಹೀಗೆ ಮಾಡುತ್ತಲೇ, ಸಿಕಂದರ್ನ ಮುಕ್ಕಾಲು ಭಾಗ ಸೈನ್ಯ ನಾಶವಾಯಿತು.
ಇನ್ನುಳಿದ ಕಾಲು ಭಾಗದ ಸೈನಿಕರನ್ನು ಚಾಣಕ್ಯ, ಚಂದು ಮತ್ತು ಸಂಗಡಿಗರು ಸೇರಿ ನಾಶ ಮಾಡಿ, ಸಿಕಂದರ್ ಭಾರತಕ್ಕೆ ಕಾಲಿಡದಂತೆ ಮಾಡಿ ಕಳುಹಿಸುತ್ತಾರೆ. ಹೀಗೆ ಒಂದು ಗೆಲುವಿನಿಂದ ಬೀಗಿದ ಚಾಣಕ್ಯರು, ತಮಗೆ ಅವಮಾನ ಮಾಡಿದ ಮಗಧ ರಾಜನ ಮೇಲೂ ದಾಳಿ ಮಾಡಿ, ಮಗಧ ರಾಜ್ಯ ಗೆಲ್ಲುವ ನಿರ್ಧಾರ ಮಾಡಿದರು. ಆದರೆ ಆ ಯುದ್ಧದಲ್ಲಿ ಸೋತು, ಅವಮಾನಿತರಾಗಿ, ಹಿಂದಿರುಗುವಾಗ, ವಿಶ್ರಾಂತಿ ಪಡೆಯಲು ಒಂದು ಕುಟೀರದ ಬದಿ ಕುಳಿತರು. ಆ ಕುಟೀರದಲ್ಲಿ ಓರ್ವ ತಾಯಿ ತನ್ನ ಮಗನಿಗೆ ಬಿಸಿ ಬಿಸಿ ಅನ್ನವನ್ನ ಉಣಬಡಿಸುತ್ತಿದ್ದಳು. ಮಗ ಹಸಿವನ್ನ ತಾಳಲಾರದೇ, ಅನ್ನದ ಮಧ್ಯಕ್ಕೆ ಕೈ ಹಾಕಿ ಊಟ ಮಾಡಲು ಹೋಗಿ ಕೈ ಸುಟ್ಟು ಕೊಳ್ಳುತ್ತಾನೆ.
ಆಗ ಆ ತಾಯಿ ಮಗನನ್ನು ಕುರಿತು, ನೀನೂ ಚಾಣಕ್ಯನ ರೀತಿ ದಡ್ಡತನ ಮಾಡಲು ಹೋಗಿ ಕೈ ಸುಟ್ಟುಕೊಂಡೆ ನೋಡು. ರಾಜ್ಯ ಗೆಲ್ಲಲು ಹೋಗುವವನು ಮೊದಲು ರಾಜ್ಯವನ್ನ ಆವರಿಸಬೇಕು. ನಂತರ ರಾಜನ ಮೇಲೆ ದಾಳಿ ಮಾಡಬೇಕು. ನೀನು ಅದೇ ರೀತಿ ಅನ್ನವನ್ನ ಬದಿಯಿಂದ ತಿನ್ನುವುದು ಬಿಟ್ಟು, ಅನ್ನದ ಮಧ್ಯ ಭಾಗಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡೆ ಎನ್ನುತ್ತಾಳೆ. ಆಗ ಚಾಣಕ್ಯರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಮತ್ತು ತಮ್ಮ ಕಣ್ತೆರಿಸಿದ ಆ ತಾಯಿಗೂ ಚಾಣಕ್ಯರು ಧನ್ಯವಾದ ಹೇಳಿ ಅಲ್ಲಿಂದ ಹೊರಡುತ್ತಾರೆ.
ನಂತರ ಚಂದುವಿನ ಜೊತೆ ಸೇರಿ, ಮಗಧ ರಾಜ್ಯವನ್ನು ಆವರಿಸಲು ನಿರ್ಧರಿಸುತ್ತಾರೆ. ವಿಷಕನ್ಯೆಯರು, ಗೂಢಾಚಾರಿಗಳು, ಸೈನಿಕರು, ಹೀಗೆ ಎಲ್ಲರನ್ನೂ ಅಣುವುಗೊಳಿಸಿ, ಒಂದೊಂದಾಗಿ ಮಗಧ ರಾಜ್ಯದ ಸೈನಿಕರನ್ನು ನಾಶ ಮಾಡುತ್ತಾ ಬರುತ್ತಾರೆ. ಯುದ್ಧ ಮಾಡಲು ಮಗಧ ರಾಜ ಧನನಂದ ಅಶಕ್ತನಾಗಿದ್ದಾನೆಂದು ಅರಿತಾಗ, ಚಾಣಕತ್ಯರು ತಮ್ಮ ಸೈನ್ಯದೊಂದಿಗೆ ಮಗಧದ ಮೇಲೆ ಯುದ್ಧಸಾರಿ ರಾಜ್ಯ ಗೆಲ್ಲುತ್ತಾರೆ.
ಹೀಗೆ ರಾಜ್ಯ ಗೆದ್ದು, ಆ ರಾಜ್ಯವನ್ನು ಚಂದುವಿಗೆ ನೀಡಿ, ಆ ರಾಜ್ಯದ ರಾಜನನ್ನಾಗಿ ಮಾಡುತ್ತಾರೆ. ಹೀಗೆ ಚಾಣಕ್ಯರ ಕೈ ಕೆಳಗೆ ಪಳಗಿದ ಯುವಕ ಚಂದುವೇ ಚಂದ್ರಗುಪ್ತ ಮೌರ್ಯ. ಮುಂದೆ ಚಂದ್ರಗುಪ್ತನ ಮಗನ ಕಾಲದಲ್ಲೂ ರಾಜ್ಯ ನಡೆಸಲು ಚಾಣಕ್ಯರು ಸಹಕರಿಸುತ್ತಾರೆ. ಹೀಗೆ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಹುಡುಗನನ್ನು ರಾಜನನ್ನಾಗಿ ಮಾಡಿದ ಚಾಣಕ್ಯರು, ಪ್ರಪಂಚದಲ್ಲಿ ಯಾರೂ ಮೀರಿಸಲಾಗದ ಪಂಡಿತರೆಂದೆನಿಸಿಕೊಳ್ಳುತ್ತಾರೆ.
ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ
Tirupati Tirumala: ತಿರುಪತಿ ತಿರುಮಲ ಲಡ್ಡು ಪ್ರಸಾದದ ಇಂಟ್ರೆಸ್ಟಿಂಗ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
Discussion about this post