ಏಕಲವ್ಯ ಹೆಸರಿನದು ನಮ್ಮ ಮಹಾಭಾರತದಲ್ಲೇ ಒಂದು ವಿಶಿಷ್ಟ ಸ್ಥಾನ. ಗುರುವಿನಿಂದ ವಿದ್ಯೆಯನ್ನು ನೇರವಾಗಿ ಪಡೆಯುವ ಅವಕಾಶದಿಂದ ವಂಚಿತನಾದರೂ ಗುರು ಪ್ರತಿಮೆಯನ್ನು ಕಣ್ಮುಂದೆ ಇರಿಸಿಕೊಂಡು ಕಾಡಿನ ಏಕಾಂತದಲ್ಲಿ ಬಿಲ್ವಿದ್ಯೆಯನ್ನು ಸಾಧಿಸಿಕೊಂಡ ಕುಶಾಗ್ರಮತಿ ಆತ. ಅದರಲ್ಲೂ ‘ಶಬ್ದವೇಧಿ’ ಸಾಧನೆ! ಅಂದರೆ, ಕಣ್ಣಿಗೆ ಗೋಚರವಾಗದ ಚಲನೆಯನ್ನೂ ಶಬ್ದದ ಮೂಲಕವೇ ಗ್ರಹಿಸಿ ಬಿಲ್ಲಿನಿಂದ ಬಾಣ ಬಿಡುವ ಅಪೂರ್ವ ಜಾಣ್ಮೆ! ಈ ಅನನ್ಯ ಅಪೂರ್ವ ವಿದ್ಯೆಯನ್ನು ಗುರು ದ್ರೋಣರ ವಿದ್ಯಾಶೀರ್ವಾದದ ಬಲದಿಂದ ಅರ್ಜುನ ಪಡೆದು ಕೊಂಡಿದ್ದರೆ ಏಕಲವ್ಯ ತನ್ನದೇ ಆದ ಏಕಾಗ್ರತೆ, ತನ್ಮಯತೆ, ನಿರಂತರ ಸಾಧನೆಗಳಿಂದ ಗಳಿಸಿಕೊಂಡಿದ್ದ! ಇಂಥ ಕಾರಣಗಳಿಂದ ಏಕಲವ್ಯ ನಮ್ಮ ಪಾಲಿಗೆ ಮಹತ್ವದ ಚೈತನ್ಯ. ಈ ಹೆಸರು ಮತ್ತು ಹೆಸರಿನ ಹಿಂದಿರುವ ಸಂಕಲ್ಪ ಚೈತನ್ಯಶೀಲವಾಗಿರಲೆಂಬ ಹಾರೈಕೆಗಳಿಂದ ಕರ್ನಾಟಕ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ಏಕಲವ್ಯ ಕ್ರೀಡಾಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಚಿಕ್ಕಮಗಳೂರಿನಿಂದ ರಾಜ್ಯಮಟ್ಟದಲ್ಲಿ ತನ್ನ ಕ್ರೀಡಾ ಪ್ರತಿಭೆಗೆ ‘ಏಕಲವ್ಯ’ ಪ್ರಶಸ್ತಿ ಪುರಸ್ಕೃತರಾದವರಲ್ಲಿ ಜೆ.ಎಂ. ಶವಾದ್ ಅವರದು ವಿಶೇಷವಾದ ಹೆಸರು. ಏಕಲವ್ಯನ ರೀತಿಯಲ್ಲಿಯೇ, ಕಣ್ಣಿಗೆ ಕಾಣದ ಎಲ್ಲವನ್ನೂ ಶಬ್ದದ ಮೂಲಕ, ತನ್ನ ಕುಶಾಗ್ರಮತಿಯಿಂದ ಗ್ರಹಿಸಿ; ಕಣ್ಣಿನಲ್ಲಿ ಇರದ ಶಕ್ತಿಯನ್ನು ತನ್ನ ಇಡೀ ಶರೀರಕ್ಕೆ ತಂದುಕೊಂಡು ಆ ಮೂಲಕ ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವುದರಲಿ ನಮ್ಮ ಶವಾದ್ ಅವರ ಸಿದ್ಧಿ ತುಂಬಾ ಮುಖ್ಯವಾಗುತ್ತದೆ.
ಹೌದು, ಶವಾದ್ ಕಣ್ಣಿನ ಬೆಳಕನ್ನು ವಿಧಿ ಆರಿಸಿಬಿಟ್ಟಿದೆ. ಆದರೆ, ವಿಧಿಯ ಜೊತೆಗೇ ಪಂದ್ಯ ಹೂಡಿದ ಶವಾದ್ ತನ್ನ ಕ್ರೀಡಾ ಸಾಧನೆಯಿಂದ ತನ್ನ ಪರಿಸರದಲ್ಲೇ ಪ್ರತಿಭೆಯ ಜ್ಯೋತಿಯಾಗಿ ತಾನೂ ಬೆಳೆದು ತನ್ನಂಥ ಎಲ್ಲರಿಗೂ ಜೊತೆಗೆ ಕಣ್ಣಿನ ಬೆಳಕು ಪ್ರಜ್ವಲಿಸುತ್ತಿರುವವರಿಗೂ ಮಾರ್ಗದರ್ಶಿ ಆಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ, ಜಯಪುರ-ಕೊಪ್ಪ ಹೆದ್ದಾರಿಯ ನಡುವಿರುವ ಪುಟ್ಟ ಗ್ರಾಮ ಜೇಡಿಕೆರೆ. ನಿಸರ್ಗದ ಮಡಿಲಿನಲ್ಲಿರುವ, ಹಸಿರ ಸಿರಿ ಉಕ್ಕುಕ್ಕಿ ಮೆರೆಯುತಿರುವ ಈ ಊರಿನಲ್ಲಿ ಕಾಸರಗೋಡಿನಿಂದ ವಲಸೆ ಬಂದು ನೆಲೆಯಾಗಿದ್ದ ಪುಟ್ಟದೊಂದು ಕುಟುಂಬ, ಮಹ್ಮದ್ ಆಲಿ ಮತ್ತು ಆಲಿಮಾ ಅವರದು. ನೌಷಲ್, ಶವಾದ್, ಆರಿಫ್ ಮೂರು ಜನ ಪುಟ್ಟ ಮಕ್ಕಳು. ಗಾರೆ ಕೆಲಸ ಮಾಡುತ್ತಿದ್ದ ಮಹ್ಮದ್ ಆಲಿಯವರಿಗೆ ಈ ಪುಟ್ಟ ಸಂಸಾರವನ್ನು ದಿಟ್ಟವಾಗಿ ಬೆಳೆಸಬೇಕೆಂಬುದೊಂದೇ ಅಂತಃಕರಣದ ಕನಸು. ಅಂದಂದಿನ ದುಡಿಮೆ ಅಂದಂದಿನ ಹೊಟ್ಟೆಗೂ ಬಟ್ಟೆಗೂ ನೇರ ಎಂಬ ಪರಿಸ್ಥಿತಿಯಿದ್ದರೂ ಮನೆಯ ನೆಮ್ಮದಿ ತೃಪ್ತಿಗಳಿಗೆ ಕೊರತೆ ಇರಲಿಲ್ಲ.
ಆದರೆ ವಿಧಿ ಹೃದಯಾಘಾತದ ನೆಪದಲ್ಲಿ ಬಂದು ಆ ಪುಟ್ಟ ಮನೆಯ ನೆಮ್ಮದಿಯನ್ನೇ ತನ್ನೊಂದಿಗೆ ಒಯ್ದು ಬಿಟ್ಟಿತು. ವಿಧಿಯ ಹೊಡೆತಕ್ಕೆ ಮಹ್ಮದ್ ಆಲಿಯವರನ್ನು ಕಳೆದುಕೊಂಡ ಗರ್ಭಿಣಿ ಆಲಿಮಾ ಮೂರು ಮಕ್ಕಳೊಂದಿಗೆ ಅನಾಥ ಪರಿಸ್ಥಿತಿಯಲ್ಲಿ ಕಂಗೆಟ್ಟರು. ಇಂತಹ ದುರ್ಭರ ಸನ್ನಿವೇಶದಲ್ಲಿಯೇ ಜೇಡಿಕೆರೆ ಸಮೀಪದ ಕಟ್ಟೆಮನೆ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಒಂಬತ್ತು ವರ್ಷದ ಮಗ ಶವಾದ್ ಟೈಫಾಯಿಡ್ನಿಂದ ಬಳಲತೊಡಗಿದ. ಬಿಟ್ಟೂ ಬಿಡದೆ ಕಾಡುತ್ತಿದ್ದ ಜ್ವರಕ್ಕೆ ತಕ್ಷಣ ಒಳ್ಳೆಯ ಚಿಕಿತ್ಸೆಯನ್ನು ನೀಡಿಸಲು ಮನೆಯಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಸಂಬಂಧಿಕರು ಕೊಪ್ಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಯತ್ನಿಸಿದರೂ ಜ್ವರದ ತಾಪ ನಿಯಂತ್ರಣಕ್ಕೆ ಬರುತ್ತಿರಲಿಲ್ಲ.
ಕಂಗೆಟ್ಟಿದ್ದ ಹುಡುಗನನ್ನು ಸಂತೈಸಲು ಚಿಕ್ಕಮ್ಮ ತನ್ನ ಮಗುವನ್ನು ತೋರಿಸಿ ‘ನೋಡು ಪಾಪು ಬಂದಿದೆ’ ಎಂದರೆ ಕಣ್ಣು ತೆರೆದ ಹುಡುಗ ‘ಎಲ್ಲಿ ಪಾಪು? ಕಾಣುತ್ತಿಲ್ಲ . . , ಏನೂ ಕಾಣುತ್ತಿಲ್ಲ.. ..’ ಎಂದ. ಮತ್ತಿನ ಮತ್ತೆಲ್ಲ ಪ್ರಯತ್ನಗಳೂ ವಿಫಲವಾದುವು. ಹುಡುಗನಿಗೆ ಅಂದು ಆರಿದ ಕಣ್ಣಿನ ಬೆಳಕು ಮತ್ತೇ ಆ ಕಣ್ಣುಗಳಲ್ಲಿ ಪ್ರಜ್ವಲಿಸಲಿಲ್ಲ. ಈ ಬರಸಿಡಿಲಿನ ಆಘಾತಕ್ಕೆ ತತ್ತರಿಸಿ ಬಿದ್ದ ತುಂಬು ಗರ್ಭಿಣಿ ತಾಯಿ ಆಲಿಮಾರಿಗೆ ಒಂದು ದಿನ ಪೂರಾ ಪ್ರಜ್ಞೆಯೂ ಇರಲಿಲ್ಲ. ಆ ಸಮಯದಲ್ಲಿ ಜೊತೆಗೆ ನಿಂತವರು ಊರವರು, ಬಂಧುಗಳು.
ಶವಾದ್ಗೆ ಕಣ್ಣಿನ ಬೆಳಕು ಆರಿದ್ದರೂ ಜ್ವರದ ತಾಪ ಇಳಿದಿರಲಿಲ್ಲ. ಹುಡುಗನನ್ನು ಉಳಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದರು. ಸುಮಾರು ಒಂದು ತಿಂಗಳಿನ ಹೋರಾಟದಿಂದ ಜ್ವರ ಕಡಿಮೆಯಾಗಿ ಮನೆಗೆ ಬಂದರೂ ನರದೌರ್ಬಲ್ಯವೆಂಬ ಕಾರಣಪಟ್ಟಿಯಿಂದ ಶವಾದ್ ಶಾಶ್ವತ ಅಂಧತ್ವಕ್ಕೆ ಬಲಿಯಾಗಿದ್ದ. ಮನೆಯಲ್ಲಾಗ ಪುಟ್ಟ ತಂಗಿ ರಹನಾಜ್ ಕೂಡಾ ಹುಟ್ಟಿದ್ದಳು.
ಅದುವರೆವಿಗೂ ಆ ಕುಟುಂಬ ಅಂಧರನ್ನೇ ನೋಡಿರಲಿಲ್ಲ, ಅಂಧರ ಜೀವನ ವಿಧಾನ ಹೇಗೆಂಬುದೂ ಗೊತ್ತಿರಲಿಲ್ಲ. ಅತ್ಯಂತ ಚಟುವಟಿಕೆಯಿಂದ ನಾಲ್ಕಾರು ಮೈಲಿ ನಡೆದು ಶಾಲೆಗೆ ಹೋಗಿಬರುತ್ತಿದ್ದ ಮಗು ಈಗ ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರ ಆಸರೆ ಪಡೆಯುವಂತಾದುದು ತಾಯಿಯ ಕರುಳಿಗೆ ಬೆಂಕಿ ಇಟ್ಟಂತಾಗಿತ್ತು. ತಾಯಿ ಆಲೀಮಾ ಬೀಡಿ ಕಟ್ಟಿ ದುಡಿದ ಹಣದಿಂದ ಜೀವನ ಹೊರೆಯುತ್ತಿದ್ದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿತ್ತು.
ಅಂಧಕಾರದ ಕತ್ತಲೆಯ ತೆಕ್ಕೆಯಲ್ಲಿ ನರಳುತ್ತಿದ್ದ ಮನೆಗೆ ಬೆಳಕಿನ ಆಶಾಕಿರಣವಾಗಿ ಬಂದವರು ಕಾಂಚನಮಾಲಾ ಮೇಡಂ. ತಮ್ಮ ವಿದ್ಯಾರ್ಥಿಗೆ ಒದಗಿ ಬಂದ ಸಂಕಷ್ಟಕ್ಕೆ ಮರುಗಿದ ಅವರು ಚಿಕ್ಕಮಗಳೂರಿನ ‘ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ’ಗೆ ಶವಾದ್ ನನ್ನು ಸೇರಿಸಿದರೆ ಅವನ ಭವಿಷ್ಯಕ್ಕೆ ಒಳಿತಾಗಬಹುದೆಂಬ ಸಲಹೆ ನೀಡಿದರು.
ಎಂದೂ ಒಬ್ಬರನ್ನೊಬ್ಬರು ಬಿಟ್ಟಿರದೇ ಬೆಳೆದಿದ್ದ ತಾಯಿ ಮಕ್ಕಳಿಗೆ ಈಗ ಅಷ್ಟು ದೂರ ಹೋಗಿ ಇರುವುದು ಹೇಗೆ? ಎನ್ನುವ ಚಿಂತೆ ಕಾಡತೊಡಗಿತು. ಜೊತೆಗೆ ಕಾಲೆಳೆಯುವ ಮಾತುಗಳು, ‘ಒಮ್ಮೆ ಹೋದರೆ ಮತ್ತೇ ಹಿಂದಕ್ಕೆ ಬರಲು ಆಗದು’ ಎನ್ನುವಂಥವೂ ಹೆದರಿಕೆ ಹುಟ್ಟಿಸುತ್ತಿತ್ತು. ಈ ಹೆದರಿಕೆ ತಲ್ಲಣಗಳಲ್ಲೇ ಮತ್ತೂ ಒಂದು ವರ್ಷ ಕಳೆಯಿತು.
ಶವಾದ್ ಮನದ ಎಲ್ಲಾ ನೋವುಗಳನ್ನೂ ಅಕ್ಷರಶಃ ಅರಿತ ತಾಯಿ ದೃಢಸಂಕಲ್ಪ ಮಾಡಿ 2005ರಲ್ಲಿ ಚಿಕ್ಕಮಗಳೂರಿಗೆ ಮಗನನ್ನು ಕರೆತಂದರು. ಬದುಕನ್ನು ನೋಡುವ ಮೊದಲೇ ದೃಷ್ಟಿಭಾಗ್ಯವನ್ನು ಕಳೆದುಕೊಂಡ ಶವಾದ್ ಇಲ್ಲಿ ನಿಜವಾದ ಬದುಕನ್ನು ಅರಿತುಕೊಳ್ಳತೊಡಗಿದ. ಐದನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಏಳು ವರ್ಷಗಳ ಆಶಾಕಿರಣದ ವಾಸ್ತವ್ಯ ನೂರಾರು ಕನಸುಗಳು ಕಾಮನಬಿಲ್ಲಿನ ವರ್ಣಮಾಲೆಯನ್ನು ಶವಾದ್ ಮನದಲ್ಲಿ ಮೂಡಿಸತೊಡಗಿದವು.
ಆಶಾಕಿರಣಕ್ಕೆ ಬಂದ ಮೊದ ಮೊದಲ ದಿನಗಳಲ್ಲಿ ಕುಗ್ಗಿ ಹೋಗಿದ್ದ ಶವಾದ್ ಡಾ|| ಜೆ.ಪಿ. ಕೃಷ್ಣೇಗೌಡರ ಅಂತಃಕರಣದ ಸ್ಪರ್ಶದಿಂದ ಬಹುಬೇಗ ಚೇತರಿಕೊಂಡ. ಆಶಾಕಿರಣ ಶಾಲೆಯ ಶಿಕ್ಷಕ ಬಂಧುಗಳು ಪ್ರೀತಿಯ ನುಡಿಗಳಿಂದ ಅಂಧ ಮಕ್ಕಳು ತಮ್ಮ ಒಳಗಣ್ಣಿನಿಂದ ಹೇಗೆಲ್ಲಾ ನೋಡಬಹುದು ಎಂದು ಹೇಳಿಕೊಡತೊಡಗಿದಾಗ ಶವಾದ್ ಮನದ ಮುಂದೆ ಹೊಸ ಹೊಸ ಬಣ್ಣದ ಸಂಭ್ರಮ ಮಿನುಗತೊಡಗಿತು.
ಆಶಾಕಿರಣಕ್ಕೆ ಬಂದ ಹದಿನೈದು ದಿನಗಳಲ್ಲೇ ಬ್ರೈಲ್ ಲಿಪಿ ಕಲಿತಾಗ ಶವಾದ್ ಆತ್ಮವಿಶ್ವಾಸ ವೃದ್ಧಿಸಿತು. ಜೊತೆಯಲ್ಲಿದ್ದ ಮಕ್ಕಳ ಕಥೆಗಳನ್ನೆಲ್ಲಾ ಕೇಳ ಕೇಳುತ್ತಾ ಬದುಕಿನ ವೈಶಾಲ್ಯದ ಅರಿವೂ ಆಯಿತು.
ಕಣ್ಣಿಲ್ಲದ ತನಗೆ ನಗು ಎನ್ನುವುದು ಹೀಗೇ ಜೊತೆಗೆ ನಿಲ್ಲಬಹುದು ಎಂಬ ಭರವಸೆ ತುಂಬಿದ ಆತ್ಮವಿಶ್ವಾಸ ಶವಾದ್ ಬದುಕಿನ ಅದ್ಭುತ ಆಸರೆಯಾಯಿತು. ಓದಿನಲ್ಲಿ ಅಪಾರ ಶ್ರದ್ಧೆ ಮೂಡಿ ಬಂದಿತು. ವರ್ಷ ಕಳೆದ ಬಳಿಕ ಆಟದ ಮೈದಾನಕ್ಕೂ ಇಳಿದು ಆಟ ಆಡುವ ಹುಮ್ಮಸ್ಸು ಬಂದಿತು.
ಅಂದಿನ ‘ಆಶಾಕಿರಣ’ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಿ.ಎಲ್. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಆತ್ಮವಿಶ್ವಾಸದಿಂದ ನಡೆಯುವುದನ್ನೂ, ಓಡುವುದನ್ನೂ ಕಲಿತ ಶವಾದ್ಗೆ ತಾನೂ ಕಲಿಯ ಬಲ್ಲೇ, ತಾನೂ ಸಾಧಿಸಬಲ್ಲೆ ಎನ್ನುವ ಆತ್ಮ ಸ್ಥೈರ್ಯ ತಾನೇ ತಾನಾಗಿ ಒದಗಿ ಬರತೊಡಗಿತು. ಆಗ ಹೆಚ್ಚು ಪ್ರಚಾರದಲ್ಲಿದ್ದ ಆಟ ಅಂಧರ ಕ್ರಿಕೆಟ್ ಸಹಜವಾಗಿ ಇವರನ್ನು ಸೆಳೆದುಕೊಂಡಿತು. 2007ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೇಟ್ ಟೂರ್ನಮೆಂಟ್ನಲ್ಲಿ ಭಾಗವಹಿಸಿ ‘ರನ್ನರ್ ಅಪ್’ ಸ್ಥಾನ ಪಡೆದಾಗ ಶವಾದ್ ಆತ್ಮವಿಶ್ವಾಸ ನೂರ್ಮಡಿಯಾಯಿತು. ಕ್ರೀಡಾ ವಿಭಾಗದಲ್ಲಿ ತನಗೊಂದು ಸ್ಥಾನ ಗಟ್ಟಿಯಾಗಿದೆ ಎಂಬ ಭರವಸೆ ಬಂದಿತು. ಶವಾದ್ನ ಈ ಶಕ್ತಿಯ ಕಾರಣದಿಂದ ನಂತರದ 5-6 ವರ್ಷಗಳವರೆಗೂ ಅಂಧರ ಕ್ರಿಕೇಟ್ನಲ್ಲಿ ಚಿಕ್ಕಮಗಳೂರು ಆಶಾಕಿರಣ ಶಾಲೆ ತನ್ನ ಸ್ಥಾನವನ್ನು ಖಾಯಂಗೊಳಿಸಿಕೊಂಡಿತು.
ಈ ಗೆಲುವು ಕೊಟ್ಟ ಅದ್ಭುತವಾದ ಸ್ಥೈರ್ಯದಿಂದ ಶವಾದ್ ದಿನಚರಿ ಬದಲಾಯಿತು. ಪ್ರಾತಃಕಾಲ 3.30ಕ್ಕೆ ಎದ್ದು ಬೆಳಗಿನ ಆರು ಗಂಟೆಯವರೆಗೆ ರನ್ನಿಂಗ್, ಜಾಗಿಂಗ್. ನಂತರ ಶ್ರೀ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಕರಾಟೆ, ಆ ನಂತರ ಗೋಪಾಲ್ ನೇತೃತ್ವದಲ್ಲಿ ಕ್ರೀಡಾ ತರಬೇತಿ. ಹೀಗೆ ಸತತವಾದ ಸಾಧನೆಯಿಂದ IBSA (Indian Blind Sports Association) ಮತ್ತು PCI (Para Olympic Committee Of India) ಕಣ್ಣಿಗೂ ಬಿದ್ದ ಶವಾದ್ನನ್ನು 2010 ರಲ್ಲಿ ಚಂಡಿಗಡ್ನ ಪಂಚಕುಳದ ರಾಷ್ಟ್ರೀಯ ಕ್ರೀಡಾಕೂಟ ಅಥ್ಲೆಟಿಕ್ಸ್ ಬದುಕಿನ ತೆಕ್ಕೆಗೆ ಸೆಳೆದುಕೊಂಡಿತು.
ಉದ್ದ ಜಿಗಿತ, 800 ಮೀಟರ್ ಓಟದಲ್ಲಿ ಚಿನ್ನ ಮತ್ತು 400 ಮೀಟರ್ ಓಟದಲ್ಲಿ ಕಂಚು ಗೆದ್ದು ಟರ್ಕಿ ರಾಷ್ಟ್ರಕ್ಕೆ 4 ನೇ ಅಂಧರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದ ಶವಾದ್ ಈ ಮೂಲಕ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ದಕ್ಷಿಣ ಭಾರತದ ಮೊದಲ ಅಂಧ ಕ್ರೀಡಾಪಟು ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು. ಆ ನಂತರದ್ದೆಲ್ಲಾ ಅಥ್ಲೆಟಿಕ್ಸ್ನಲ್ಲಿ ಶವಾದ್ ಅಪರಿಮಿತ ಯಶೋಗಾಥೆ. 2011 ರಲ್ಲಿ ಅಮೇರಿಕಾದ ಅಂತರರಾಷ್ಟ್ರೀಯ ಕ್ರೀಡಾಕೂಟ, 2012ರಲ್ಲಿ ಮಲೇಷಿಯಾದ ಕೌಲಾಲಂಪುರದಲ್ಲಿ ಒಲಂಪಿಕ್ ಅರ್ಹತಾ ಸುತ್ತಿನ ಕ್ರೀಡಾಕೂಟ, 2014ರಲ್ಲಿ ದಕ್ಷಿಣ ಕೋರಿಯಾದಲ್ಲಿ ಏಷಿಯಾನ್ ಕ್ರೀಡಾಕೂಟ ಈ ಎಲ್ಲವುಗಳಲ್ಲಿ ಪದಕಗಳ ಮಾಲೆಯನ್ನು ಕೊರಳಿಗೆ ಏರಿಸಿಕೊಂಡರು.
2012 ರಲ್ಲಿ 800 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದೂ ಇಂದಿಗೂ ಶವಾದ್ ಹೆಸರಿನಲ್ಲೇ ಮುಂದುವರೆಯುತ್ತಿದೆ. 2014 ರಲ್ಲಿ 200 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲೂ ಶವಾದ್ ರಾಷ್ಟ್ರೀಯ ದಾಖಲೆ ಬರೆದಿದ್ದರು ಈ ಎಲ್ಲ ಸಾಧನೆಗಳಿಗೆ ತಕ್ಕ ಪ್ರೋತ್ಸಾಹವೂ ಶವಾದ್ರನ್ನೂ ಅರಸಿ ಬಂದಿದೆ.
ಕೊಪ್ಪ, ಚಿಕ್ಕಮಗಳೂರುಗಳಲ್ಲಿ ತವರಿನ ಅಭಮಾನದ ಸನ್ಮಾನ ಮಾಡುವುದರ ಜೊತೆಗೆ ಕೊಪ್ಪದಲ್ಲಿ 30*40 ಅಳತೆಯ ನಿವೇಶನದ ಗೌರವವನ್ನೂ ನೀಡಲಾಗಿದೆ. ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾದ ‘ಏಕಲವ್ಯ’ ಪ್ರಶಸ್ತಿಯ ಹಿರಿಮೆಯನ್ನು ಕೊರಳಿಗೇರಿಸಿಕೊಂಡಾಗ ಒಲಂಪಿಕ್ ಪದಕ ಪಡೆಯಲೇಬೇಕೆಂಬ ಸಂಕಲ್ಪ ಶವಾದ್ ಮನದಲ್ಲಿ ಗಟ್ಟಿಯಾಗಿದೆ.
ತಾನೂ ನಿರಂತರ ಸಾಧನೆ ಮಾಡುತ್ತಾ ತನ್ನಂಥ ಸಾವಿರಾರು ಕ್ರೀಡಾಪಟುಗಳ ಪಾಲಿನ ಆಶಾಕಿರಣವಾಗಿರುವ ಸ್ಫೂರ್ತಿಯ ಚಿಲುಮೆ ಶವಾದ್ಗೆ ಹಾರ್ದಿಕ ಅಭಿನಂದನೆಗಳು. ಇಂಥವರೆಲ್ಲರ ಪಾಲಿನ ಭರವಸೆಯ ಬೆಳಕಾಗಿದೆ.
Eklavya’ aspirant, inspiration fountain J.M. Shavad
Discussion about this post