ಚಿಕ್ಕಮಗಳೂರು: ಅನಸೂಯಾ ದೇವಿ ಜಯಂತಿ ಅಂಗವಾಗಿ ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಬ್ಯಾರಿಕೇಡ್ ಮೂಲಕ ಸಾಗಿ ದತ್ತಪಾದುಕೆ ದರ್ಶನ ಪಡೆದು ಹೋಮ ಹವನ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದತ್ತ ಜಯಂತಿ ಉತ್ಸವಕ್ಕೆ ಚಾಲನೆ ನೀಡಿದರು.
ವಿಎಚ್ಪಿ ಹಾಗೂ ಬಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತ ಜಯಂತಿ ಹಾಗೂ ದತ್ತ ಮಾಲಾ ಅಭಿಯಾನದ ಅಂಗವಾಗಿ ಬೆಳಗ್ಗೆ ನಗರದಲ್ಲಿ ನಡೆದ ಮಹಿಳೆಯರ ಸಂಕೀರ್ತನ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ವಾಹನದಲ್ಲಿ ಆಗಮಿಸಿದ ಸಹಸ್ರಾರು ಭಕ್ತರು ದತ್ತ ಪೀಠಕ್ಕೆ ಆಗಮಿಸಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.
ರುದ್ರರಮಣೀಯ ನಿಸರ್ಗದಲ್ಲಿ ಬಿಸಿಲಿನ ವಾತಾವರಣದ ನಡುವೆ ಮಹಿಳೆಯರು ಬ್ಯಾರಿಕೇಡ್ ಮೂಲಕ ಸಾಲಾಗಿ ಆಗಮಿಸಿದರು. ಜೈ ಶ್ರೀರಾಮ್ , ದತ್ತಪೀಠ ನಮ್ಮದು ಎಂಬ ಘೋಷಣೆಗಳೊಂದಿಗೆ ಸಾಗುತ್ತಾ ಗುಹಾಂತರ ದೇವಾಲಯದಲ್ಲಿ ಪಾದುಕೆ ದರ್ಶನ ಪಡೆದರು.
ದೇವಾಲಯದ ಸಮೀಪದಲ್ಲಿ ಶೆಡ್ನಲ್ಲಿ ಅರ್ಚಕ ಕೇಶವ ಭಟ್, ಸುಶಾಂತ್ ಭಟ್ ಹಾಗೂ ಪ್ರವೀಣ್ ನೇತೃತ್ವದಲ್ಲಿ ಗಣಹೋಮ, ದುರ್ಗಾ ಹೋಮದ ಪೂರ್ಣಾಹುತಿ ಯೊಂದಿಗೆ ಅನಸೂಯಾ ಪೂಜೆ ನೆರವೇರಿಸಲಾಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ರತ್ನಾಕರಶೆಟ್ಟಿ ದಂಪತಿಗಳು ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಮಂಗಳೂರು, ತುಮಕೂರು, ತುರುವೆಕೆರೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಕಾರ್ಕಾಳದಿಂದ ಆಗಮಿಸಿದ ರಾಘವೇಂದ್ರ, ಅನೀತಾ ನೇತೃತ್ವದ ೨೦ ಜನರ ತಂಡ ಹೊನ್ನಮ್ಮನಹಳ್ಳದಿಂದ ಪಾದಾಯಾತ್ರೆಯಲ್ಲಿ ಆಗಮಿಸಿ ದರ್ಶನ ಪಡೆದರು. ದಾರ್ಮಿಕ ಸಭೆಯಲ್ಲಿ ಶಾರದಾಶ್ರಮದ ಶುಭವ್ರತ ಪ್ರಾಣ ಮಾತಾಜಿ ಮಾತನಾಡಿ, ಇದೊಂದು ಪುಣ್ಯ ದಿವಸದಲ್ಲಿ ಮಹಿಳೆಯರೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಪವಿತ್ರ ವಾತಾವರಣದಲ್ಲಿ ಆದ್ಯಾತ್ಮಿಕ ವಾತಾವರಣ ಸೇರಿದೆ ಎಂದರು.
ವಿಶ್ವಹಿಂದೂ ಪರಿಷದ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ಮಾನೆ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಎಎಸ್ಪಿ ಶ್ರುತಿ, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಗೋಪಿವ್ರತ ಪ್ರಾಣ ಮಾತಾಜಿ, ಪಲ್ಲವಿ ಸಿಟಿ ರವಿ, ವೀಣಾ ರತ್ನಾಕರ್, ಜಿಪಂ ಮಾಜಿ ಸದಸ್ಯರಾದ ಕವಿತಾಲಿಂಗರಾಜು, ಜಸಂತಾ ಅನಿಲ್, ಸುನೀತಾ ಜಗದೀಶ್, ಪವಿತ್ರ, ವಿಶಾಖ, ಶೋಭಾರಾಜೇಶ್, ಚಂಪಾ ಜಗದೀಶ್, ಭವ್ಯನಟೇಶ್, ಪುಷ್ಪಾ ಮೋಹನ್, ಸುಧಾ, ರಘು ಸಕಲೇಶಪುರ, ಮಹೇಂದ್ರ, ಪ್ರದೀಪ್ ಇದ್ದರು.
Dattapaduke Darshan
Discussion about this post