ಮುಂಬೈ: ಮುಂದಿನ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಗೆ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗದೇ ಇರುವುದಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಕೈಬಿಟ್ಟಿದೆ. ಗರಿಷ್ಠ ನಾಲ್ವರನ್ನು ಮಾತ್ರವೇ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವ ಇದೆ.
ಕಳೆದ ಕೆಲವು ಐಪಿಎಲ್ ಸೀಸನ್ಗಳಲ್ಲಿ ಮುಂಬೈ ಪರ ಅಮೋಘ ಕೊಡುಗೆ ನೀಡಿದ್ದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಟ್ರೆಂಟ್ ಬೋಲ್ಟ್ ಅವರನ್ನು ಈ ಬಾರಿ ಉಳಿಸಿಕೊಳ್ಳುವುದು ತಂಡಕ್ಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: IPL 2022: ಕನ್ನಡಿಗ ರಾಹುಲ್ ಕೈಬಿಟ್ಟ ಪಂಜಾಬ್, ಪಾಂಡ್ಯಗಿಲ್ಲ ಮುಂಬೈ ಪರ ಆಡುವ ಅವಕಾಶ
ಪ್ರಮುಖ ಆಟಗಾರರನ್ನು ಕೈಬಿಡಬೇಕಾಗಿ ಬಂದುದು ತಂಡದ ಪಾಲಿಗೆ ಅತಿ ಕಠಿಣ ಮತ್ತು ಬೇಸರದ ಸಂಗತಿಯಾಗಿತ್ತು ಎಂದು ಶರ್ಮಾ ಹೇಳಿದ್ದಾರೆ.
‘ನೀವೆಲ್ಲ ತಿಳಿದಂತೆ, ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಪಾಲಿಗೆ ಈ ವರ್ಷ ಬಹಳ ಕಠಿಣ ಸವಾಲು ಎದುರಾಯಿತು. ನಮ್ಮಲ್ಲಿ ಅದ್ಭುತ ಆಟಗಾರರಿದ್ದರು. ಅವರೆನ್ನೆಲ್ಲ ಕೈಬಿಡುವುದೆಂದರೆ ಬಹಳ ಖೇದಕರ’ ಎಂದು ಅವರು ಹೇಳಿದ್ದಾರೆ.
ರೋಹಿತ್ ಅವರನ್ನು ಮುಂಬೈ ಇಂಡಿಯನ್ಸ್ 16 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ರೋಹಿತ್ ಅವರು ಆಟಗಾರರ ಹೆಸರು ಉಲ್ಲೇಖಿಸದಿದ್ದರೂ ಕಿಶಾನ್, ಪಾಂಡ್ಯ ಸಹೋದರರು ಹಾಗೂ ಬೋಲ್ಟ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೆಂಬ ಅತೀವ ಬಯಕೆ ಅವರಲ್ಲಿತ್ತು ಎಂಬುದು ಅವರ ಮಾತಿನಿಂದ ವೇದ್ಯವಾಗಿದೆ.
‘ಅವರೆಲ್ಲ (ತಂಡದಿಂದ ಕೈಬಿಡಲಾಗಿರುವ) ಈ ಫ್ರಾಂಚೈಸಿಗಾಗಿ ಅದ್ಭುತ ಆಟವಾಡಿದ್ದರು ಹಾಗೂ ಅನೇಕ ನೆನಪುಗಳನ್ನು ಇಲ್ಲಿ ಉಳಿಸಿದ್ದಾರೆ. ಹೀಗಾಗಿ ಅವರನ್ನು ಬಿಟ್ಟುಕೊಟ್ಟಿದ್ದು ನಮಗೆ ನಿಜಕ್ಕೂ ವೇದನೆಯ ಸಂಗತಿ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
IPL 2022: ಪಂಜಾಬ್ ಕಿಂಗ್ಸ್ನಿಂದ ರಾಹುಲ್ ಕೈಬಿಟ್ಟದ್ದಕ್ಕೆ ಅನಿಲ್ ಕುಂಬ್ಳೆ ಕೊಟ್ಟ ಕಾರಣವಿದು…
Discussion about this post