ಚಂಡೀಗಡ: ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹರಿಯಾಣ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಬಂಧಿಸಿದ್ದೇವೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಇನ್ಸ್ಟಾಗ್ರಾಂ ಲೈವ್ ಚಾಟ್ನಲ್ಲಿ ಮತ್ತೊಬ್ಬ ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿರುದ್ಧ ಯುವರಾಜ್ ಜಾತಿ ನಿಂದನೆ ಮಾಡಿದ್ದರು ಎನ್ನಲಾಗಿದೆ.
ಓದಿ: T-20 World Cup: ಅಶ್ವಿನ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿದ್ದಕ್ಕೆ ಏನಂದರು ಕ್ಯಾಪ್ಟನ್ ಕೊಹ್ಲಿ?
ಯುವರಾಜ್ ಸಿಂಗ್ ಅವರು ಶನಿವಾರ ಹನ್ಸಿಗೆ ಬಂದಿದ್ದರು. ನಾವು ಔಪಚಾರಿಕವಾಗಿ ಅವರನ್ನು ಬಂಧಿಸಿ, ಕೆಲವು ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದೇವೆ ಎಂದು ಹನ್ಸಿ ಡಿಎಸ್ಪಿ ವಿನೋದ್ ಶಂಕರ್ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂ ಲೈವ್ ಸಂದರ್ಭದಲ್ಲಿ ಚಾಹಲ್ ವಿರುದ್ಧ ಯುವರಾಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಹನ್ಸಿ ನಿವಾಸಿ ರಜತ್ ಕಲ್ಸನ್ ಆರೋಪಿಸಿದ್ದರು. ಜತೆಗೆ ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚಾಹಲ್ ಕುರಿತು ತಾವು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಯುವರಾಜ್ ಸಿಂಗ್ ಕ್ಷಮೆಯಾಚಿಸಿದ್ದರು.
‘ಗೆಳೆಯರೊಂದಿಗೆ ಚರ್ಚೆ ಮಾಡುತ್ತಿದ್ದೆ. ಸ್ನೇಹಿತರ ನಡುವಿನ ಮಾತುಕತೆ ಅದಾಗಿತ್ತಷ್ಟೇ ವಿನಃ ಉದ್ದೇಶಪೂರ್ವಕವಾದ ನಿಂದನೆ ಆಗಿರಲಿಲ್ಲ. ಆದರೂ ನನಗೆ ಅರಿವಿಲ್ಲದೆಯೇ ಯಾರಾದ್ದಾದರೂ ಮನಸ್ಸಿಗೆ ಬೇಸರ ಮೂಡಿಸಿದ್ದರೆ, ಜವಾಬ್ದಾರಿಯುತ ಪ್ರಜೆಯಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಯುವರಾಜ್ ಹೇಳಿದ್ದರು.
ಓದಿ: ಕೇರಳದಲ್ಲಿ ಮೇಘಸ್ಫೋಟಕ್ಕೆ 8 ಮಂದಿ ಸಾವು: ಮುಂದುವರಿದ ಭಾರಿ ಮಳೆ, ಪರಿಹಾರಕ್ಕೆ ಸೇನೆಯ ನೆರವು
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ ಆಟಗಾರರಲ್ಲೊಬ್ಬರಾಗಿದ್ದ ಯುವರಾಜ್ ಸಿಂಗ್ 2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು. ಅದೇ ವೇಳೆ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ತಗುಲಿತ್ತು. ಅನಾರೋಗ್ಯದ ನಡುವೆಯೂ ವಿಶ್ವಕಪ್ ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿ ತವರಿಗೆ ಮರಳಿದ್ದರು. ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಲಯ ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು.
Discussion about this post