ಅಬುದಾಭಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಆದರೆ, ಸೆಮಿಫೈನಲ್ ಪ್ರವೇಶಿಸುವ ಕನಸು ಉಳಿದ ಎಲ್ಲ ಪಂದ್ಯಗಳನ್ನು ಅತ್ಯುತ್ತಮ ರನ್ರೇಟ್ನೊಂದಿಗೆ ಗೆಲ್ಲುವುದು ಹಾಗೂ ನ್ಯೂಜಿಲೆಂಡ್ – ಅಫ್ಘಾನಿಸ್ತಾನದ ಮುಂದಿನ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.
ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಸೂಪರ್ 12ರ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಲ್ರೌಂಡ್ ಆಟವಾಡಿದ ಭಾರತ 66 ರನ್ಗಳ ಜಯ ಸಾಧಿಸಿದೆ. ಆದರೆ, ಅದಕ್ಕೂ ಮೊದಲಿನ ಎರಡು ಪಂದ್ಯಗಳಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು.
ಓದಿ: ಐಸಿಸಿ ಟ್ವೆಂಟಿ–20 ರ್ಯಾಂಕಿಂಗ್: 5ನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ, ರಾಹುಲ್ಗೆ 8ನೇ ಸ್ಥಾನ
ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿನ ಸಮಸ್ಯೆಗಳೇ ಹಿಂದಿನ ಪಂದ್ಯಗಳಲ್ಲಿ ತಂಡದ ಸೋಲಿಗೆ ಕಾರಣ ಎಂದು ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಟಗಾರರು ತಮ್ಮ ಫ್ರಾಂಚೈಸ್ಗಾಗಿ ಏನು ಮಾಡುತ್ತಾರೆ ಎಂಬುದು ನಿಜವಾಗಿಯೂ ನನ್ನ ಕಾಳಜಿಯಲ್ಲ. ಈ ಸಮಯದಲ್ಲಿ ಅವರು ಇಲ್ಲಿ ಟೀಂ ಇಂಡಿಯಾಕ್ಕಾಗಿ ಆಡುವಾಗ ಏನು ಮಾಡುತ್ತಾರೆ ಎಂಬುದು ಮುಖ್ಯ. ಅವರು ಬಿಡುವಿನ ವೇಳೆ ತಂಡದಿಂದ ಹೊರಗಿದ್ದಾಗ ಏನು ಮಾಡಬೇಕು ಎಂಬುದರ ಕುರಿತೂ ನಾವು ಸ್ಪಷ್ಟವಾಗಿ ಹೇಳಿದ್ದೇವೆ’ ಎಂದು ಹೇಳಿದ್ದಾರೆ. ಐಪಿಎಲ್ ಉದ್ದೇಶಿಸಿ ಪರೋಕ್ಷವಾಗಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
‘ಪ್ರತಿಯೊಬ್ಬ ಆಟಗಾರರೂ ಇಂದು ಭಿನ್ನವಾಗಿ ಆಟವಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಮೊದಲ ಎರಡು ಪಂದ್ಯಗಳಲ್ಲಿಯೂ ಹೀಗೆಯೇ ಇರಬೇಕಿತ್ತು. ಆದರೆ ಅದು ಸಂಭವಿಸಲಿಲ್ಲ. ನೀವು ದೀರ್ಘಕಾಲದವರೆಗೆ ಟ್ರ್ಯಾಕ್ನಲ್ಲಿದ್ದಾಗ ಮಾತ್ರ ಇದು ಸಂಭವಿಸಬಹುದಷ್ಟೆ. ನಿರ್ಧಾರ ತೆಗೆದುಕೊಳ್ಳುವಿಕೆಯೂ ಕೂಡ ಕೆಲವೊಮ್ಮೆ ಸಮಸ್ಯೆಯಾಗಬಹುದು. ಮೊದಲ ಎರಡು ಪಂದ್ಯಗಳಲ್ಲಿ ಅದು ನಿಜವಾಗಿದೆ’ ಎಂದು ರೋಹಿತ್ ಹೇಳಿದ್ದಾರೆ.
ರೋಹಿತ್-ರಾಹುಲ್ ಅಬ್ಬರ: ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರ ಅಬ್ಬರದ ಶತಕದ ಜೊತೆಯಾಟದ ಬಲದಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ ಎರಡು ವಿಕೆಟ್ಗಳಿಗೆ 210 ರನ್ ಗಳಿಸಿತ್ತು. ರೋಹಿತ್ ಶರ್ಮಾ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ರಾಹುಲ್ 35 ಎಸೆತಗಳಲ್ಲಿ 50ರ ಗಡಿ ಮುಟ್ಟಿದ್ದರು. ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ ಏಳು ವಿಕೆಟ್ಗಳಿಗೆ 144 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು.
ಮುಂದಿನ ಪಂದ್ಯದಲ್ಲಿ ಭಾರತವು ನಾಳೆ (ಶುಕ್ರವಾರ) ರಾತ್ರಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
Discussion about this post