ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪರ ಕೊನೆಯ ಟ್ವೆಂಟಿ–20 ಪಂದ್ಯವನ್ನು ಚೆನ್ನೈಯಲ್ಲಿ ಆಡುವ ಆಸೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ಹೇಳಿದ್ದಾರೆ.
ಚೆನ್ನೈ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೃತ್ತಿ ಜೀವನವನ್ನು ಶಿಸ್ತಿನಿಂದಲೇ ರೂಪಿಸಿಕೊಂಡು ಬಂದಿದ್ದೇನೆ. ಅಂತಾರಾಷ್ಟ್ರೀಯ ಏಕ ದಿನ ವಿದಾಯದ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದೆ. ಅದೇ ರೀತಿ ವಿದಾಯದ ಟ್ವೆಂಟಿ–20 ಪಂದ್ಯವನ್ನು ಚೆನ್ನೈಯಲ್ಲಿ ಆಡುವ ಇಚ್ಛೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಆದರೆ, ನಿವೃತ್ತಿಯ ಕುರಿತಾದ ಸುಳಿವನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಐಪಿಎಲ್ನಲ್ಲಿ ಇನ್ನು ಮುಂದೆ ಆಡಬೇಕೇ ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಮಯಾವಕಾಶವಿದೆ. ಮುಂದಿನ ಐಪಿಎಲ್ ಋತು 2022ರ ಏಪ್ರಿಲ್ನಲ್ಲಿ ಆರಂಭವಾಗಲಿದೆ. ಈಗಿನ್ನೂ ನವೆಂಬರ್ ತಿಂಗಳಷ್ಟೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊನೆಗೊಂಡ ಐಪಿಎಲ್ ಟೂರ್ನಿಯಲ್ಲಿ ಧೋನಿ ನಾಯಕತ್ವದ ಸಿಎಸ್ಕೆ ಟ್ರೋಫಿ ಜಯಿಸಿತ್ತು. ಆ ಬಳಿಕ ಧೋನಿ ಅವರು ಐಪಿಎಲ್ನಿಂದಲೂ ನಿವೃತ್ತರಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಸುದ್ದಿ ತಾಣಗಳಲ್ಲಿ ಹರಡಿದ್ದವು. ಆದರೆ, ಧೋನಿ ಮಾತ್ರ ಮೌನ ಮುರಿದಿರಲಿಲ್ಲ.
ಕಳೆದ ವರ್ಷ ಆಗಸ್ಟ್ನಲ್ಲಿ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು. ಬಳಿಕ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಟ ಮುಂದುವರಿಸಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಐಪಿಎಲ್ ಟೂರ್ನಿ ಬಳಿಕ, ಟ್ವೆಂಟಿ–20 ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಮಾರ್ಗದರ್ಶಕರಾಗಿ ಅವರನ್ನು ಬಿಸಿಸಿಐ ನೇಮಕ ಮಾಡಿತ್ತು. ಹೀಗಾಗಿ ಅವರು ಐಪಿಎಲ್ ತ್ಯಜಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಅವೆಲ್ಲದಕ್ಕೂ ಅವರು ತೆರೆ ಎಳೆದಿದ್ದಾರೆ.
ಇನ್ನಷ್ಟು ಸುದ್ದಿಗಳು…
ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್: ವಿರಾಟ್ ಕೊಹ್ಲಿಯ ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
Discussion about this post