ನವದೆಹಲಿ: ಎಡಗಾಲಿನ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಕಾರಣ ರೋಹಿತ್ ಶರ್ಮಾ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ರೋಹಿತ್ ಬದಲಿಗೆ ಬಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಮುಂಬೈಯಲ್ಲಿ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಅವರ ಮಂಡಿರಜ್ಜು ನೋವು ಉಲ್ಬಣಗೊಂಡಿತ್ತು. ಅವರ ಕೈಗೂ ಗಾಯವಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ರೋಹಿತ್ ಅವರ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಉಪನಾಯಕನಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ: ಋತುರಾಜ್, ವೆಂಕಟೇಶ್ಗೆ ತಂಡದಲ್ಲಿ ಸ್ಥಾನ?
ಟ್ವೆಂಟಿ–20 ಹಾಗೂ ಏಕದಿನ ಮಾದರಿಯ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಟೆಸ್ಟ್ ತಂಡದಿಂದ ರೋಹಿತ್ರನ್ನು ಕೈಬಿಟ್ಟಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇಬ್ಬರೂ ನಾಯಕರು ಜತೆಯಾಗಿ ಆಡುವುದಿಲ್ಲ, ಇದಕ್ಕೆ ಕಾರಣವೇನು? ತಂಡದಲ್ಲಿ ಒಡಕು ಮೂಡಿರುವುದು ನಿಜವೇ? ಎಂದೆಲ್ಲ ಹಲವು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ಜನವರಿ 19ರಿಂದ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಅಷ್ಟರೊಳಗೆ ರೋಹಿತ್ ಗುಣಮುಖರಾಗಲಿದ್ದಾರೆಯೇ? ಅಥವಾ ಅವರು ಗಾಯದ ಸಮಸ್ಯೆಯಿಂದ ಆಫ್ರಿಕಾ ಪ್ರವಾಸ ಕೈಗೊಳ್ಳಲಾಗದಿದ್ದರೆ ಮುಂದೇನು ಎಂಬುದನ್ನು ಬಿಸಿಸಿಐ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಕೊಂಡಾಡಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್: ಕಾರಣವೇನು?
Discussion about this post