ಡಿಸೆಂಬರ್ 20, 2021: ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹಾಗೂ ಮಾಜಿ ಆಯ್ಕೆಸಮಿತಿ ಸದಸ್ಯ ಸಬಾ ಕರೀಮ್ ಕರ್ನಾಟಕದ ಭರ್ಜರಿ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ರನ್ನು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿರುವ ಆಯ್ಕೆಮಂಡಳಿಯ ನಿರ್ಧಾರವನ್ನು ಸ್ವಾಗತಿಸಿ ಮುಕ್ತಕಂಠದಿಂದ ಹೊಗಳಿರುವುದಲ್ಲದೇ ಇದೊಂದು ಅತ್ಯಂತ ಸಮಯೋಚಿತ ಹಾಗೂ ಸೂಕ್ತ ನಿರ್ಧಾರವೆಂದಿದ್ದಾರೆ.
ಈ ಮೊದಲು ರೋಹಿತ್ ಶರ್ಮಾರನ್ನು ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದರೂ ಅವರು ಗಾಯಗೊಂಡು ಅಲಭ್ಯರಾದ ಕಾರಣ ಅವರ ಸ್ಥಳದಲ್ಲಿ ಬೇರೊಬ್ಬ ಆಟಗಾರನನ್ನು ಉಪನಾಯಕನನ್ನಾಗಿ ಆರಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಇಂತಹ ಅದ್ಭುತ ಅವಕಾಶ ಕೆ.ಎಲ್.ರಾಹುಲ್ರ ಪಾಲಿಗೆ ಒದಗಿಬಂದಿತು. ರೋಹಿತ್ ಅವರ ಬದಲೀ ಆಟಗಾರನನ್ನಾಗಿ ಭಾರತ ಎ ತಂಡದ ನಾಯಕ ಪ್ರಿಯಾಂಕ್ ಪಂಚಾಲ್ರನ್ನು ಆರಿಸಲಾಗಿದೆ.
ವರದಿಗಾರರೊಂದಿಗೆ ಮಾತನಾಡುತ್ತಿದ್ದ ಸಬಾ ಕರೀಮ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊರುವ ಆಟಗಾರನ ಹುಡುಕಾಟದಲ್ಲಿದ್ದಾಗ ಆರಂಭಿಕ ರಾಹುಲ್ ಹೆಸರು ಮುಂಚೂಣಿಯಲ್ಲಿದ್ದು ತಂಡದ ಇತರ ಆಟಗಾರರ ಅಭಿಪ್ರಾಯಗಳನ್ನು ಪಡೆದ ನಂತರ ಹಾಗೂ ಭವಿಷ್ಯದ ನಾಯಕನನ್ನು ಬೆಳೆಸುವ ದೃಷ್ಟಿಯಿಂದಲೂ ಈ ಆಯ್ಕೆ ನಡೆದಿದೆ ಎಂದು ಅಭಿಪ್ರಾಯ ಪಟ್ಟರು.
ನನ್ನ ಪ್ರಕಾರ ಇದೊಂದು ಅತ್ಯಂತ ಸೂಕ್ತವಾದ ಆಯ್ಕೆಯಾಗಿದ್ದು ಅತ್ಯಂತ ಸಮಯೋಚಿತವಾಗಿದೆ ಎಂದ ಸಬಾ ಬಹಳಷ್ಟು ಸಮಯಗಳಲ್ಲಿ ಆಯ್ಕೆದಾರರು ತಂಡದ ನಿರ್ವಹಣಾ ವಿಭಾಗದೊಂದಿಗೆ ಮಾತನಾಡಿ ಅಲ್ಲಿಂದ ದೊರೆಯುವ ಅಭಿಪ್ರಾಯಗಳನ್ನು ಪರಿಗಣಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದರು. ಈ ನಿರ್ಧಾರವು ನಾಯಕ ವಿರಾಟ್ ಕೊಹ್ಲಿಯವರಿಗೂ ಸಂತಸ ತಂದಿರಬಹುದೆಂದು ತಿಳಿಸಿದ ಅವರು ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ರಾಹುಲ್ರಿಂದ ಉತ್ತಮ ಸಹಕಾರವನ್ನು ಕೊಹ್ಲಿ ನಿರೀಕ್ಷಿಸಬಹುದು ಎಂದಿದ್ದಾರೆ.
ಅಷ್ಟೇ ಅಲ್ಲದೆ, ರಾಹುಲ್ ಭವಿಷ್ಯದ ನಾಯಕನಾಗುವ ಪ್ರತಿಭೆ ಹೊಂದಿರುವ ಆಟಗಾರನಾಗಿದ್ದು ಐಪಿಎಲ್ನಲ್ಲಿ ರಾಹುಲ್ ಪಂಜಾಬ್ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದು ಅವರೊಬ್ಬ ಕ್ರಿಕೆಟ್ನ ಎಲ್ಲಾ ಮಾದರಿಗಳಲ್ಲೂ ಉತ್ತಮ ಸಾಧನೆ ತೋರಿಸಬಲ್ಲ ಆಟಗಾರ ಎಂದಿದ್ದಾರೆ ಸಬಾ ಕರೀಮ್.
ದಕ್ಷಿಣ ಆಫ್ರಿಕಾ ವಿರದ್ಧದ ಭಾರತದ ಟೆಸ್ಟ್ ಸರಣಿ ಡಿಸೆಂಬರ್ 26ರಂದು ಪ್ರಾರಂಭವಾಗಲಿದೆ. ಸರಣಿಯ ಪ್ರಥಮ ಪಂದ್ಯ ಸೆಂಚುರಿಯನ್ನಲ್ಲಿ ನಡೆಯಲಿದ್ದು ಇಲ್ಲಿಂದ ರಾಹುಲ್ರ ಹೊಸ ಇನ್ನಿಂಗ್ಸ್ ಆರಂಭವಾಗಲಿದೆ.
Saba Karim hails the selection of KL Rahul as the Vice captain of team India as perfect and timely decision
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಿಲ್ಲ ರೋಹಿತ್: ಪ್ರಿಯಾಂಕ್ ಪಾಂಚಾಲ್ ತಂಡಕ್ಕೆ
ಇದನ್ನೂ ಓದಿ: ವಿರಾಟ್ ಕೊಹ್ಲಿ ಈಗಲೂ ತಂಡದ ನಾಯಕ, ಅವರ ಶ್ರೇಷ್ಠ ಆಟ ಟೀಂ ಇಂಡಿಯಾಗೆ ಅಗತ್ಯ: ರೋಹಿತ್ ಶರ್ಮಾ
Discussion about this post