ನಾಗ್ಪುರ: ಐಸಿಸಿ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ವೀಕ್ಷಿಸಲು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈ ಮಧ್ಯೆ, ಭಾರತ-ಪಾಕ್ ನಡುವಣ ಪಂದ್ಯ ‘ರಾಷ್ಟ್ರ ಧರ್ಮ’ಕ್ಕೆ ವಿರುದ್ಧವಾದದ್ದು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.
ನಾಗಪುರ ವಿಮಾನ ನಿಲ್ದಾಣದಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪಾಕಿಸ್ತಾನ ಜತೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತ-ಪಾಕ್ ನಡುವಣ ಇಂದಿನ ಪಂದ್ಯವನ್ನು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಆಯೋಜಿಸಲಾಗಿದೆ. ಕ್ರಿಕೆಟ್ ಆಟ ಮತ್ತು ಭಯೋತ್ಪಾದನೆಯ ಆಟ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಓದಿ:ICC T20 WC: ಕನ್ನಡಿಗ ರಾಹುಲ್ರಿಂದ ಅತಿ ಹೆಚ್ಚು ರನ್, ಶಮಿಯಿಂದ ಹೆಚ್ಚು ವಿಕೆಟ್ ನಿರೀಕ್ಷಿಸಬಹುದು ಎಂದ ಬ್ರೆಟ್ ಲೀ
ಸ್ವಾತಂತ್ರ್ಯೋತ್ತರದಲ್ಲಿ ಉಭಯ ದೇಶಗಳ ನಡುವೆ ಮೂರು ಬಾರಿ ಯುದ್ಧ ಸಂಭವಿಸಿದೆ. ಇದರ ಹೊರತಾಗಿ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವಣ ಕ್ರಿಕೆಟ್ ಪಂದ್ಯವನ್ನು ಬಾಬಾ ರಾಮದೇವ್ ವಿರೋಧಿಸಿದ್ದಾರೆ.
ಕಳೆದ ಕೆಲವು ದಶಕಗಳಲ್ಲಿ ಹಲವು ಬಾರಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿಗಳು ನಡೆದಿದ್ದವು. ಹಲವು ಬಾರಿ ಭಯೋತ್ಪಾದನೆ ಕಾರಣಕ್ಕೆ ಸರಣಿಗಳು ರದ್ದಾದ ಉದಾಹರಣೆಗಳು ಇವೆ. ಆದರೆ ಜಮ್ಮು-ಕಾಶ್ಮೀರದ ಉರಿಯಲ್ಲಿ ಸಿಆರ್ಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯ ಬಳಿಕ ಕ್ರಿಕೆಟ್ ಬಾಂಧವ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾದ್ದರಿಂದ ಉಭಯ ದೇಶಗಳ ತಂಡಗಳು ಮುಖಾಮುಖಿಯಾಗಿವೆ.
ಮತ್ತೊಂದೆಡೆ, ಇಂದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ ಪಾಕಿಸ್ತಾನದ ವಿರುದ್ಧ ಭಾರತ ಸೋತಿಲ್ಲ. ಈ ದಾಖಲೆಯನ್ನು ಉಳಿಸಿಕೊಳ್ಳುವ ಹಂಬಲ ವಿರಾಟ್ ಕೊಹ್ಲಿ ನೇತೃತ್ವದ ‘ಟೀಂ ಇಂಡಿಯಾ’ದ್ದಾದರೆ, ಇತಿಹಾಸ ಬರೆಯಬೇಕೆಂಬ ಛಲದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವಿದೆ.
ಓದಿ:T20 ವಿಶ್ವಕಪ್: ಆರಂಭಿಕ ಜೋಡಿ ಯಾರೆಂಬ ಕುತೂಹಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ
Discussion about this post