ನವದೆಹಲಿ: ಟಿ–20 ವಿಶ್ವಕಪ್ನಲ್ಲಿ ಆಡುವ ಭಾರತ ತಂಡದಲ್ಲಿ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರಿಗೆ ಸ್ಥಾನ ನೀಡಿದ್ದಕ್ಕೆ ಅವರ ಸ್ಪಿನ್ ಕೌಶಲವೇ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಶ್ವಿನ್ ಅವರು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ 2017ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಬಿಟ್ಟರೆ ಆ ಬಳಿಕ ತಂಡದಲ್ಲಿ ಸ್ಥಾನ ಪಡೆದಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೀಗ ಬದಲಾದ ಸನ್ನಿವೇಶದಲ್ಲಿ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶ ಅವರಿಗೆ ದೊರೆತಿದೆ.
ಟೀಮ್ ಇಂಡಿಯಾದ ಒಟ್ಟು 15 ಮಂದಿ ಆಟಗಾರರ ಬಳಗದಲ್ಲಿ ಅಶ್ವಿನ್ ಸೇರಿದಂತೆ ಒಟ್ಟು ನಾಲ್ವರು ಸ್ಪಿನ್ನರ್ಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಆದರೆ, ಅಶ್ವಿನ್ ಅವರಿಗೆ ಸ್ಥಾನ ನೀಡಿದ ವಿಚಾರ ಕ್ರಿಕೆಟ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು.
ಓದಿ: T-20 World Cup: ಪಾಕಿಸ್ತಾನದಿಂದ ಟೀಮ್ ಇಂಡಿಯಾಗೆ ಭಾರಿ ಸವಾಲು ಎದುರಾಗದೆಂದ ಅಜಿತ್ ಅಗರ್ಕರ್
ಈ ವಿಚಾರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೊಹ್ಲಿ, ‘ನಿಗದಿತ ಓವರ್ಗಳ ಪಂದ್ಯಗಳಲ್ಲಿ ಅಶ್ವಿನ್ ಅವರು ಪ್ರದರ್ಶಿಸಿರುವ ಸಾಮರ್ಥ್ಯ, ಕೌಶಲಗಳನ್ನು ಪರಿಗಣಿಸಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಚುಟುಕು ಕ್ರಿಕೆಟ್ನಲ್ಲಿಯೂ ಅವರು ವಿಶೇಷ ಸ್ಫೂರ್ತಿಯೊಂದಿಗೆ ಬೌಲಿಂಗ್ ಮಾಡುತ್ತಾರೆ’ ಎಂದು ಹೇಳಿದ್ದಾರೆ.
‘ಐಪಿಎಲ್ ಟೂರ್ನಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅವರ ಬೌಲಿಂಗ್ ಅನ್ನು ಗಮನಿಸಿದರೆ ನಿಮಗೇ ತಿಳಿಯುತ್ತದೆ. ವಿಶ್ವದ ಖ್ಯಾತ ಬ್ಯಾಟ್ಸ್ಮನ್ಗಳ ವಿರುದ್ಧ ಅವರು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುತ್ತಿದ್ದಾರೆ. ಸ್ಪಿನ್ ಬೌಲಿಂಗ್ನಲ್ಲಿ ಬ್ಯಾಟ್ಸ್ಮನ್ಗಳು ದೊಡ್ಡ ಹೊಡೆತ ಆಡಿದಾಗ ಸ್ಪಿನ್ನರ್ಗಳು ಸಾಮಾನ್ಯವಾಗಿ ವಿಚಲಿತರಾಗುವುದು ಹೆಚ್ಚು. ಆದರೆ, ಇದನ್ನು ಮೀರಿ ನಿಲ್ಲುವ ಸಾಮರ್ಥ್ಯ ಅಶ್ವಿನ್ ಅವರಿಗೆ ಇದೆ’ ಎಂದೂ ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಮತ್ತು ಅಶ್ವಿನ್ ನಡುವೆ ಮನಸ್ತಾಪವಿದೆ. ಇಂಗ್ಲೆಂಡ್ನಲ್ಲಿ ನಡೆದಿದ್ದ ಟೆಸ್ಟ್ ಸರಣಿ ವೇಳೆ ಅಶ್ವಿನ್ ಅವರು ಕೊಹ್ಲಿ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ದೂರು ನೀಡಿದ್ದರು ಎಂದೆಲ್ಲ ಇತ್ತೀಚೆಗೆ ಊಹಾಪೋಹಗಳು ಹರಡಿದ್ದವು. ಇದರ ಬೆನ್ನಲ್ಲೇ ಕೊಹ್ಲಿ ಅವರು ಅಶ್ವಿನ್ರನ್ನು ಸಮರ್ಥಿಸಿ ಹೇಳಿಕೆ ನೀಡಿದ್ದಾರೆ.
ಓದಿ: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಮುಖ್ಯಕೋಚ್
ಟಿ–20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ (ಭಾನುವಾರ) ಆರಂಭವಾಗುತ್ತಿವೆ. ಇದೇ 23ರಿಂದ ಟೂರ್ನಿ ಆರಂಭವಾಗಲಿದ್ದು, ಭಾರತವು 24ರಂದು ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ.
Discussion about this post